ನವದೆಹಲಿ: ಛತ್ತೀಸಗಡದಲ್ಲಿ ನಡೆದ ನಕ್ಸಲ್ ದಾಳಿಯಲ್ಲಿ ಬಲಿಯಾದ ವೀರ ಯೋಧರಿಗೆ ನಮನ ಸಲ್ಲಿಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ನಕ್ಸಲರ ವಿರುದ್ಧದ ಹೋರಾಟದಲ್ಲಿ ನಾವೆಲ್ಲರೂ ಒಂದಾಗಿದ್ದೇವೆ ಎಂದು ಹೇಳಿದ್ದಾರೆ.
ನಕ್ಸಲರ ವಿರುದ್ಧ ಹೋರಾಡುತ್ತಿರುವ ಅರೆಸೈನಿಕ ಪಡೆಗಳಿಗೆ ಛತ್ತೀಸಗಡದಲ್ಲಿ ಅಧಿಕಾರದಲ್ಲಿರುವ ತಮ್ಮ (ಕಾಂಗ್ರೆಸ್) ಸರಕಾರವು ಎಲ್ಲ ರೀತಿಯ ನೆರವನ್ನು ನೀಡಲಿದೆ ಎಂದು ತಿಳಿಸಿದ್ದಾರೆ.
ಛತ್ತೀಸಗಡದ ಬಿಜಾಪುರದಲ್ಲಿ ನಡೆದ ಭೀಕರ ನಕ್ಸಲ್ ದಾಳಿಯಲ್ಲಿ 22 ಯೋಧರು ಹುತಾತ್ಮರಾಗಿದ್ದಾರೆ.
ಹುತಾತ್ಮ ಯೋಧರಿಗೆ ನನ್ನ ನಮನಗಳನ್ನು ಸಲ್ಲಿಸುತ್ತಿದ್ದೇನೆ. ಅವರ ಕುಟುಂಬಗಳಿಗೆ ಸಂತಾಪವನ್ನು ಸೂಚಿಸುತ್ತೇನೆ. ಇಡೀ ದೇಶವೇ ಯೋಧರ ಬಲಿದಾನಕ್ಕೆ ಅಪಾರವಾದ ಕೃತಜ್ಞತೆಯನ್ನು ಹೊಂದಿದೆ ಎಂದು ಹೇಳಿದ್ದಾರೆ.
ನಾಪತ್ತೆಯಾದ ಯೋಧರು ಬೇಗನೇ ಹಿಂತಿರುಗಲಿದ್ದಾರೆ ಎಂದು ಆಶಿಸುತ್ತೇನೆ. ಗಾಯಗೊಂಡವರು ಆದಷ್ಟು ಬೇಗನೇ ಚೇತರಿಸಿಕೊಳ್ಳಲಿ ಎಂದು ಹೇಳಿದ್ದಾರೆ.
ಸುಮಾರು 400ರಷ್ಟು ನಕ್ಸಲರು ಎಲ್ಎಂಜಿ ಗನ್ ಸೇರಿದಂತೆ ಶಸ್ತ್ರಸಜ್ಜಿತವಾಗಿ ಹೊಂಚು ಹಾಕಿ ನಡೆಸಿದ ದಾಳಿಯಲ್ಲಿ ಭದ್ರತಾ ಪಡೆಯ 22 ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಘಟನೆಯಲ್ಲಿ 30ಕ್ಕೂ ಹೆಚ್ಚು ಸೈನಿಕರು ಗಾಯಗೊಂಡಿದ್ದಾರೆ. ಅಲ್ಲದೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಅಪಹರಿಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಆರ್ಪಿಎಫ್ನ ವಿಶೇಷ ಜಂಗಲ್ ವಾರ್ಫೇರ್ ಯುನಿಟ್ ಕೋಬ್ರಾ, ನಿಯಮಿತ ಬೆಟಾಲಿಯನ್ಗಳು ಹಾಗೂ ಬಸ್ತಾರಿಯನ್ ಬೆಟಾಲಿಯನ್, ಛತ್ತೀಸಗಡ ಪೊಲೀಸ್ನ ಜಿಲ್ಲಾ ಮೀಸಲು ಪಡೆ (ಡಿಆರ್ಜಿ) ಸೇರಿಂದೆ 1,500ರಷ್ಟು ಭದ್ರತಾ ಪಡೆಯ ಯೋಧರು ನಕ್ಸಲ್ ವಿರುದ್ಧ ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು.