ಚಂಡಿಗಡ: ಮೊಹಾಲಿಯಲ್ಲಿರುವ ಪಂಜಾಬ್ ಪೊಲೀಸ್ನ ಗುಪ್ತಚರ ವಿಭಾಗದ ಕೇಂದ್ರ ಕಚೇರಿ ಮೇಲೆ ನಡೆದ ರಾಕೆಟ್ ಚಾಲಿತ ಗ್ರೆನೇಡ್ (ಆರ್ಪಿಜಿ) ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರನ್ನು ಬಂಧಿಸಲಾಗಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮಂಗಳವಾರ ತಿಳಿಸಿದ್ದಾರೆ.
‘ಘಟನೆಯ ಸಂಬಂಧ ಇನ್ನಷ್ಟು ಮಂದಿಯನ್ನು ಬಂಧಿಸಲಾಗುವುದು. ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ.
‘ಮಹತ್ವದ ಸುಳಿವು ಲಭಿಸಿದ್ದು, ಶೀಘ್ರವೇ ಪ್ರಕರಣವನ್ನು ಭೇದಿಸಲಾಗುವುದು’ ಎಂದು ಪಂಜಾಬ್ ಡಿಜಿಪಿ ವಿ.ಕೆ. ಭಾವರಾ ಹೇಳಿದ್ದಾರೆ.
ದಾಳಿಗೆ ಟಿಎನ್ಟಿ (ಟ್ರಿನಿಟ್ರೋಟೊಲ್ಯೂನ್) ಸ್ಫೋಟಕ ಬಳಸಿರುವ ಸಾಧ್ಯತೆ ಇದೆ. ದಾಳಿ ವೇಳೆ ಕೋಣೆಯಲ್ಲಿ ಯಾರೂ ಇರಲಿಲ್ಲ. ಕೋಣೆಯ ಗೋಡೆಗಳಿಗೆ ಹಾನಿಯುಂಟಾಗಿದೆ ಮತ್ತು ಕಿಟಕಿಯ ಗಾಜುಗಳು ಪುಡಿಪುಡಿಯಾಗಿವೆ ಎಂದು ಅವರು ತಿಳಿಸಿದ್ದಾರೆ.
ಇಬ್ಬರು ವ್ಯಕ್ತಿಗಳು ಕಾರಿನಲ್ಲಿ ಬಂದು ದಾಳಿ ನಡೆಸಿರುವ ಸಾಧ್ಯತೆ ಇದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುವುದಾಗಿ ಮೂಲಗಳು ತಿಳಿಸಿವೆ.
ಗ್ಯಾಂಗ್ಸ್ಟರ್ ಹಾಗೂ ಭಯೋತ್ಪಾದಕ ಹರ್ವಿಂದರ್ ಸಿಂಗ್ ರಿಂಡಾ ದಾಳಿಯಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ ಎಂದೂ ಪೊಲೀಸರು ಶಂಕಿಸಿದ್ದಾರೆ. ಈತ ಪಾಕಿಸ್ತಾನದಲ್ಲಿದ್ದಾನೆ ಎಂದು ನಂಬಲಾಗಿದೆ.
ಮೊಹಾಲಿಯ ಸೆಕ್ಟರ್ 77ರಲ್ಲಿರುವ ಬಿಗಿ ಭದ್ರತೆಯ ಕಟ್ಟಡದ ಮೂರನೇ ಮಹಡಿಗೆ ಸೋಮವಾರ ರಾತ್ರಿ ಆರ್ಪಿಜಿ ಅಪ್ಪಳಿಸಿತ್ತು.