ಕೋಲ್ಕತ್ತ: ‘ನಾನು ಮುಖ್ಯಮಂತ್ರಿಯಾಗಿ ಮುಂದುವರಿಯಲು ನೀವು (ಮತದಾರರು) ಚುನಾವಣೆಯ ದಿನ ಮಳೆ ಬಂದರೂ ಲೆಕ್ಕಿಸದೆ ಮನೆಯಿಂದ ಹೊರಬಂದು ನನಗೆ ಮತ ನೀಡಿ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಭವಾನಿಪುರ ಕ್ಷೇತ್ರದಲ್ಲಿ ಗುರುವಾರ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಭವಾನಿಪುರ ‘ಮಿನಿ ಇಂಡಿಯಾ’ ಇದ್ದಂತೆ. ಇಲ್ಲಿ ಅನೇಕ ಸಮುದಾಯದವರು ವಾಸಿಸುತ್ತಿದ್ದಾರೆ. ನಾನು ಸಿ.ಎಂ ಆಗಿ ಮುಂದುವರಿಯಲು ನೀವು ಬಯಸಿದರೆ ದಯವಿಟ್ಟು ನನಗೆ ಮತ ನೀಡಿ’ ಎಂದು ಮನವಿ ಮಾಡಿಕೊಂಡಿದ್ದಾರೆ.
‘ಸರ್ಕಾರ ಇಮಾಮ್ಗಳಿಗೆ ಏಕೆ ಗೌರವ ಧನ ನೀಡುತ್ತದೆ ಎಂದು ಜನರು ಹಲವು ಬಾರಿ ನನನ್ನು ಪ್ರಶ್ನಿಸಿದ್ದಾರೆ. ಆದರೆ, ನಾವು ಅರ್ಚಕರು ಸೇರಿದಂತೆ ಇತರೆ ಧಾರ್ಮಿಕ ಸ್ಥಳಗಳಲ್ಲಿ ಸೇವೆ ಸಲ್ಲಿಸುತ್ತಿರುವವರಿಗೂ ಗೌರವ ಧನವನ್ನು ನೀಡುತ್ತೇವೆ’ ಎಂದು ಮಮತಾ ಸ್ಪಷ್ಟಪಡಿಸಿದರು.
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ನಂದಿಗ್ರಾಮದಿಂದ ಸ್ಪರ್ಧಿಸಿದ್ದ ಮಮತಾ ಅವರು ಸುವೇಂದು ಅಧಿಕಾರಿ ವಿರುದ್ಧ ಅಲ್ಪ ಮತಗಳ ಅಂತರದಲ್ಲಿ ಪರಾಭವಗೊಂಡಿದ್ದರು. ಆ ಹಿನ್ನೆಲೆಯಲ್ಲಿ ಮಮತಾ ಉಪ ಚುನಾವಣೆಯಲ್ಲಿ ಕಣಕ್ಕಿಳಿದಿದ್ದಾರೆ. ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಲು ಭವಾನಿಪುರ ಕ್ಷೇತ್ರದಲ್ಲಿ ಗೆಲುವು ಸಾಧಿಸುವುದು ಅನಿವಾರ್ಯವಾಗಿದೆ.
2011 ಮತ್ತು 2016ರ ವಿಧಾನಸಭೆ ಚುನಾವಣೆಗಳಲ್ಲಿ ಭವಾನಿಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಮತಾ ಗೆಲುವು ಸಾಧಿಸಿದ್ದರು. ಸೆ.30ರಂದು ನಡೆಯುತ್ತಿರುವ ಉಪಚುನಾವಣೆಯಲ್ಲಿ ಮಮತಾ ವಿರುದ್ಧ ಅಭ್ಯರ್ಥಿಯನ್ನು ಹಾಕದಿರಲು ಕಾಂಗ್ರೆಸ್ ನಿರ್ಧರಿಸಿದೆ. ಅಕ್ಟೋಬರ್ 3ರಂದು ಫಲಿತಾಂಶ ಪ್ರಕಟವಾಗಲಿದೆ.
People raise questions on why we give stipends to Imams? But we also give stipends to priests, not only the temple ones but also those from Gurudwara and other faiths and religions: West Bengal CM Mamata Banerjee pic.twitter.com/zdU7yprUsu