ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಕೋವಿಡ್-19 ಪ್ರಕರಣಗಳು ತೀವ್ರವಾಗಿ ಏರುತ್ತಿರುವ ಮಧ್ಯೆ, ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕೊನೆಯ ಮೂರು ಹಂತಗಳನ್ನು ಮುಂದೂಡಬೇಕೆಂದು ಕಾಂಗ್ರೆಸ್ ಚುನಾವಣಾ ಆಯೋಗವನ್ನು(ಇಸಿ) ಒತ್ತಾಯಿಸಿದೆ.
ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಅವರಿಗೆ ಬರೆದ ಪತ್ರದಲ್ಲಿ, ಈ ಸಮಯದಲ್ಲಿ ಹೆಚ್ಚು ಮುಖ್ಯವಾದುದು ಜನರ ಜೀವವೋ ಅಥವಾ ತಮ್ಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಚುನಾವಣೆಗಳು ಬೇಕೋ ತೀರ್ಮಾನಿಸುವಂತೆ ಬಂಗಾಳ ಕಾಂಗ್ರೆಸ್ ಮುಖ್ಯಸ್ಥ ಅಧೀರ್ ರಂಜನ್ ಚೌಧರಿ ಮನವಿ ಮಾಡಿದ್ದಾರೆ.
ಒಂದು ವೇಳೆ ಚುನಾವಣೆ ನಡೆಯಬೇಕೆಂದಾದರೆ. 'ರಂಜಾನ್' ಮುಗಿದ ನಂತರ ಮತ್ತು ಪ್ರಸ್ತುತ ಸಾಂಕ್ರಾಮಿಕ ರೋಗದ ತೀವ್ರತೆಯು ಕಡಿಮೆಯಾದ ನಂತರ ನಡೆಸಬೇಕು ಎಂದು ನಾನು ಮನವಿ ಮಾಡುತ್ತೇನೆ. ಬಂಗಾಳದಲ್ಲಿ ಈಗಾಗಲೇ ಕೋವಿಡ್-19 ತಗುಲಿದ್ದ ಇಬ್ಬರು ಅಭ್ಯರ್ಥಿಗಳು ಮೃತಪಟ್ಟಿದ್ದಾರೆ ಎಂದು ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ನಾಯಕ ನೆನಪಿಸಿದ್ದಾರೆ.
ಜಂಗೀಪುರದ ಕ್ರಾಂತಿಕಾರಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಪ್ರದೀಪ್ ಕುಮಾರ್ ನಂದಿ ಮತ್ತು ಸಂಸರ್ಗಂಜ್ನ ಕಾಂಗ್ರೆಸ್ ನಾಮನಿರ್ದೇಶಿತ ರೆಜೌಲ್ ಹಕ್ ಕಳೆದ ವಾರ ಸೋಂಕಿಗೆ ಬಲಿಯಾಗಿದ್ದರು.
ಈ ರೋಗವು ರಾಷ್ಟ್ರದಾದ್ಯಂತ ವೇಗವಾಗಿ ಹರಡುತ್ತಿದೆ ಮತ್ತು ಚುನಾವಣಾ ವ್ಯಾಪ್ತಿಯ ಪಶ್ಚಿಮ ಬಂಗಾಳವು ಈ 'ಗಂಭೀರ ಪರಿಸ್ಥಿತಿಯಿಂದ' ಹೊರತಾಗಿಲ್ಲ ಎಂದ ಚೌಧರಿ, 'ನಮ್ಮಲ್ಲಿರುವ ಯಾವುದೇ ಸಂಪನ್ಮೂಲಗಳನ್ನಾದರೂ ಈಗ ಕೋವಿಡ್ ರೋಗಿಗಳಿಗೆ ಬೆಡ್ಗಳು, ಔಷಧಿಗಳು, ಮತ್ತು ರೋಗನಿರೋಧಕಗಳ ಲಭ್ಯತೆಗೆ ಬಳಸಿಕೊಳ್ಳಬೇಕು. ಜನರ ಜೀವವೋ ಅಥವಾ ಜನ ಪ್ರತಿನಿಧಿಗಳ ಆಯ್ಕೆಯೋ ಯಾವುದು ಮುಖ್ಯವಾದುದೆಂದು ನಿರ್ಧರಿಸಿ' ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.