ನವದೆಹಲಿ: ಪಶ್ಚಿಮ ಬಂಗಾಳದ ಕಾಂಗ್ರೆಸ್ ವೀಕ್ಷಕರಾಗಿ, ಚುನಾವಣಾ ಪ್ರಚಾರದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿರುವ ಹಿರಿಯ ಮುಖಂಡ ಬಿ.ಕೆ ಹರಿಪ್ರಸಾದ್ ಅವರಿಗೆ ರಾಜ್ಯ ಕಾಂಗ್ರೆಸ್ ಘಟಕದ ಉಸ್ತುವಾರಿ ಹೊಣೆಯನ್ನೂ ನೀಡಲಾಗಿದೆ.
ಪಶ್ಚಿಮ ಬಂಗಾಳದ ಕಾಂಗ್ರೆಸ್ ಉಸ್ತುವಾರಿ ನಾಯಕ ಜಿತಿನ್ ಪ್ರಸಾದ ಅವರಿಗೆ ಕೋವಿಡ್ ತಗುಲಿರುವ ಕಾರಣ, ಹರಿಪ್ರಸಾದ್ ಅವರಿಗೆ ಹೆಚ್ಚುವರಿಯಾಗಿ ಈ ಜವಾಬ್ದಾರಿ ನೀಡಲಾಗಿದೆ.
ತಾವು ಈಗಾಗಲೇ ಹಿರಿಯ ವೀಕ್ಷಕರಾಗಿ ಪ್ರಚಾರ ನಿರ್ವಹಣೆಯನ್ನು ನೋಡಿಕೊಳ್ಳುತ್ತಿದ್ದು, ಚುನಾ ವಣೆ ಸಂದರ್ಭದಲ್ಲಿ ಜಿತಿನ್ ಅವರು ಹೊತ್ತುಕೊಂಡಿದ್ದ ಹೆಚ್ಚುವರಿ ಜವಾಬ್ದಾರಿಗಳನ್ನು ತಾತ್ಕಾಲಿಕವಾಗಿ ನಿರ್ವಹಿಸಲಿದ್ದೇನೆ ಎಂದು ಹರಿಪ್ರಸಾದ್ ತಿಳಿಸಿದ್ದಾರೆ.
‘ನಾವು ಎಡಪಕ್ಷಗಳು ಮತ್ತು ಐಎಸ್ಎಫ್ ಜತೆ ಚುನಾವಣಾ ಪೂರ್ವ ಹೊಂದಾಣಿಕೆ ಮಾಡಿಕೊಂಡಿದ್ದು, ಸರ್ಕಾರ ರಚಿಸುವ ಸ್ಥಿತಿಯಲ್ಲಿದ್ದೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಚುನಾವಣೆ ಬಳಿಕ ಅತಂತ್ರ ವಿಧಾನಸಭೆ ಸೃಷ್ಟಿಯಾದರೆ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತೀರಾ’ ಎಂಬ ಪ್ರಶ್ನೆ ಉತ್ತರಿಸಿದ ಅವರು, ಈ ಬಗ್ಗೆ ಪಕ್ಷದ ಅಧ್ಯಕ್ಷರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.
ಹರಿಪ್ರಸಾದ್ ಮತ್ತು ಆಲಂಗಿರ್ ಆಲಂ ಅವರನ್ನು ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಹಿರಿಯ ವೀಕ್ಷಕರನ್ನಾಗಿ ಪಕ್ಷವು ಜನವರಿಯಲ್ಲಿ ನೇಮಿಸಿತ್ತು. ಪಂಜಾಬ್ನ ಸಚಿವ ವಿಜಯ್ ಇಂದರ್ ಸಿಂಗ್ಲಾ ಅವರೂ ಹಿರಿಯ ವೀಕ್ಷಕರಾಗಿದ್ದಾರೆ.