ಲಖನೌ: ಭಾರತ್ ಜೋಡೊ ಯಾತ್ರೆ ಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿಗೆ ಮುತ್ತು ಕೊಟ್ಟಿದ್ದಕ್ಕೆ ಉತ್ತರ ಪ್ರದೇಶ ಸಚಿವ ದಿನೇಶ್ ಪ್ರತಾಪ್ ಟೀಕೆ ವ್ಯಕ್ತಪಡಿಸಿದ್ದಾರೆ.
ಕೆಲವು ದಿನಗಳ ಹಿಂದೆ ರಾಹುಲ್ ಗಾಂಧಿ ಅವರು ‘ಆರ್ಎಸ್ಎಸ್ 21ನೇ ಶತಮಾನದ ಕೌರವರು ಎಂದು ಟೀಕಿಸಿದ್ದರು. ಈ ವಿಚಾರವನ್ನು ಇಟ್ಟುಕೊಂಡು ದಿನೇಶ್ ಪ್ರತಾಪ್ ಅವರು ರಾಹುಲ್ ವಿರುದ್ಧ ಹರಿಹಾಯ್ದಿದ್ದಾರೆ.
'ಯಾವ ಪಾಂಡವರು ತಮ್ಮ 50ನೇ ವಯಸ್ಸಿನಲ್ಲಿ ಸಾರ್ವಜನಿಕ ಸಭೆಯಲ್ಲಿ ಸಹೋದರಿಗೆ ಮುತ್ತು ಕೊಟ್ಟಿದ್ದಾರೆ?' ಎಂದು ದಿನೇಶ್ ಪ್ರತಾಪ್ ಪ್ರಶ್ನೆ ಮಾಡಿದ್ದಾರೆ. ಇದು ನಮ್ಮ ಸಂಸ್ಕೃತಿಯಲ್ಲ, ಯಾಕೆಂದರೆ ಭಾರತದ ಸಂಸ್ಕೃತಿ ಇಂತಹ ವಿಚಾರಗಳನ್ನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಸೋನಿಯಾ ಗಾಂಧಿ ಬಗ್ಗೆ ಅವರು ವಾಗ್ದಾಳಿ ನಡೆಸಿದರು. ರಾಯ್ಬರೇಲಿ ಕ್ಷೇತ್ರಕ್ಕೆ ಸೋನಿಯಾ ಗಾಂಧಿ ಬರಬೇಕೆಂದರೆ ಅವರಿಗೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದರೆ ಮಗನ ಜೊತೆಯಲ್ಲಿ ಪಾದಯಾತ್ರೆ ಮಾಡುತ್ತಾರೆ ಎಂದು ಟೀಕಿಸಿದ್ದಾರೆ.
ಮುಂಬರುವ 2024ರ ಲೋಕಸಭೆ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಸೋಲು ಕಾಣಲಿದ್ದಾರೆ. ರಾಯ್ಬರೇಲಿಯಿಂದ ನಿರ್ಗಮಿಸುವ ಕೊನೆಯ ವಿದೇಶಿ ಮಹಿಳೆಯಾಗಲಿದ್ದಾರೆ ಎಂದು ಅವರು ಟೀಕಿಸಿದ್ದಾರೆ