ನವದೆಹಲಿ: ಭೀಮ್ ಆರ್ಮಿ ರಾಜಕೀಯ ಪಕ್ಷದ ಅಭ್ಯರ್ಥಿಗಳಿಗೆ ಏಕರೂಪದ ಚಿಹ್ನೆ ಹಂಚಿಕೆ ಮಾಡಬೇಕು ಎಂಬ ಆ ಪಕ್ಷದ ಮುಖ್ಯಸ್ಥರ ಅರ್ಜಿ ಕುರಿತು ಕಾನೂನು ಪ್ರಕಾರ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಚುನಾವಣಾ ಆಯೋಗವು ದೆಹಲಿ ಹೈಕೋರ್ಟ್ಗೆ ತಿಳಿಸಿದೆ.
ಮುಂಬರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ತಮ್ಮ ಪಕ್ಷಕ್ಕೆ ಏಕರೂಪದ ಚಿಹ್ನೆ ನೀಡಬೇಕು ಎಂದು ಭೀಮ್ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ ಆಜಾದ್ ಅವರು ಅರ್ಜಿ ಸಲ್ಲಿಸಿದ್ದರು.
ಆಯೋಗವನ್ನು ಪ್ರತಿನಿಧಿಸಿದ್ದ ವಕೀಲರು, ಆಜಾದ್ ಸಮಾಜ್ ಪಾರ್ಟಿ (ಕಾನ್ಷಿರಾಂ)ಗೆ ಏಕರೂಪದ ಚಿಹ್ನೆ ನೀಡಬೇಕು ಎಂಬ ಕುರಿತು ನಿಯಮಾನುಸಾರ ತೀರ್ಮಾನ ಕೈಗೊಳ್ಳಲಾಗುವುದು ಎಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರತೀಕ್ ಜಲನ್ ಅವರಿಗೆ ತಿಳಿಸಿದರು.
ಆಯೋಗದ ಪ್ರತಿಕ್ರಿಯೆ ಬಳಿಕ ಸಂಬಂಧಿತ ಕಾಯ್ದೆಯ ಪ್ರಕಾರ ತೀರ್ಮಾನಿಸಬೇಕು ಎಂದು ಸೂಚಿಸಿ ನ್ಯಾಯಮೂರ್ತಿಗಳು ಅರ್ಜಿಯನ್ನು ವಿಲೇವಾರಿ ಮಾಡಿದರು.
ಆಯೋಗದ ಪರ ವಾದ ಮಂಡಿಸಿದ ವಕೀಲ ಸಿದ್ಧಾಂತ್ ಕುಮಾರ್, ‘ಪಕ್ಷಗಳಿಗೆ ಚಿನ್ಹೆ ಹಂಚಿಕೆಗೆ ಪ್ರತಿ ರಾಜ್ಯಗಳಿಗೂ ಪ್ರತ್ಯೇಕ ಮಾನದಂಡ ಇರುತ್ತದೆ. ಅರ್ಜಿದಾರರು ಅದನ್ನು ಈಡೇರಿಸಬೇಕಾಗುತ್ತದೆ. ಅದರನುಸಾರ ಆದ್ಯತೆ ಮೇರೆಗೆ ಚಿಹ್ನೆ ಹಂಚಿಕೆಯಾಗಲಿದೆ’ ಎಂದರು.