ನವದೆಹಲಿ: ಕರ್ನಾಟಕ, ತ್ರಿಪುರ ಸೇರಿದಂತೆ ಮುಂಬರುವ ವಿವಿಧ ವಿಧಾನಸಭಾ ಚುನಾವಣೆಗಳಿಗೆ ಪಕ್ಷದ ತಯಾರಿ ಸೇರಿ ವಿವಿಧ ವಿಚಾರಗಳ ಕುರಿತು ಚರ್ಚಿಸಲು ಪಕ್ಷದ ಇಲ್ಲಿನ ರಾಷ್ಟ್ರೀಯ ಕಚೇರಿಯಲ್ಲಿ ಸೋಮವಾರದಿಂದ ಎರಡು ದಿನಗಳ ಕಾಲ ಸಭೆ ನಡೆಸಲು ಬಿಜೆಪಿ ನಿರ್ಧರಿಸಿದೆ.
ಈ ಸಭೆಯಲ್ಲಿರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಪಕ್ಷದ ಹಿರಿಯ ಮುಖಂಡರು, ಎಲ್ಲ ರಾಜ್ಯದ ಸಂಘಟನಾ ವಿಭಾಗದ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು ಭಾಗವಹಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಅನುಸರಿಸಬೇಕಾದ ಕಾರ್ಯತಂತ್ರ, ಪಕ್ಷ ಸಂಘಟನೆ ಸೇರಿದಂತೆ ಜಾಗತಿಕ ಆರ್ಥಿಕ ಹಿಂಜರಿತದ ಮಧ್ಯೆಯೂ ಭಾರತದ ಆರ್ಥಿಕ ಬೆಳವಣಿಗೆ ಹಾಗೂ ದೇಶಕ್ಕೆ ಜಿ–20ಯ ಅಧ್ಯಕ್ಷತೆ ದೊರೆತ ವಿಚಾರ ಸಭೆಯಲ್ಲಿ ಚರ್ಚಿತವಾಗಲಿರುವ ಮುಖ್ಯ ವಿಷಯಗಳಾಗಿವೆ ಎನ್ನಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
ಕಾರ್ಯಕಾರಿಣಿಗೆ ಅಮರಿಂದರ್ ಸಿಂಗ್ ಆಯ್ಕೆ
ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಗೆ ಪಂಜಾಬ್ನ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಸುನೀಲ್ ಜಾಖಡ್ ಹಾಗೂ ಉತ್ತರ ಪ್ರದೇಶದ ಪಕ್ಷದ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಅವರನ್ನು ಬಿಜೆಪಿ ಶುಕ್ರವಾರ ಆಯ್ಕೆ ಮಾಡಿದೆ.
ಕಾಂಗ್ರೆಸ್ನ ಮಾಜಿ ವಕ್ತಾರ ಜೈವೀರ್ ಶೇರ್ಗಿಲ್ ಅವರನ್ನು ಪಕ್ಷದ ರಾಷ್ಟ್ರೀಯ ವಕ್ತಾರರನ್ನಾಗಿ ನೇಮಿಸಲಾಗಿದೆ. ಉತ್ತರಾಖಂಡದ ಪಕ್ಷದ ಮಾಜಿ ಅಧ್ಯಕ್ಷ ಮದನ್ ಕೌಶಿಕ್, ಛತ್ತೀಸಗಡದ ಪಕ್ಷದ ಮಾಜಿ ಅಧ್ಯಕ್ಷ ವಿಷ್ಣು ದೇವ್ ಸಾಯಿ, ಪಂಜಾಬ್ನ ರಾಣಾ ಗುರುಮೀತ್ ಸಿಂಗ್ ಸೋಧಿ, ಮನೊರಂಜನ್ ಕಾಲಿಯಾ ಮತ್ತು ಅಮನ್ಜೋತ್ ಕೌರ್ ರಾಮುವಾಲಿಯಾ ಅವರನ್ನು ಕಾರ್ಯಕಾರಿಣಿಯ ವಿಶೇಷ ಆಹ್ವಾನಿತರನ್ನಾಗಿ ನೇಮಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.