ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಂ ವ್ಯಕ್ತಿಯನ್ನು ಪ್ರೀತಿಸುತ್ತಿದ್ದ ಮಗಳನ್ನೇ ಜೀವಂತವಾಗಿ ಸುಟ್ಟ ಕುಟುಂಬ

Last Updated 16 ಫೆಬ್ರುವರಿ 2021, 3:45 IST
ಅಕ್ಷರ ಗಾತ್ರ

ಗೋರಖ್‌ಪುರ: ಉತ್ತರ ಪ್ರದೇಶದಲ್ಲಿ ಮರ್ಯಾದೆಗೇಡು ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಅಂತರ್ ಧರ್ಮೀಯ ವ್ಯಕ್ತಿಯೊಂದಿಗಿನ ಪ್ರೇಮ ಸಂಬಂಧ ಹೊಂದಿದ್ದ ಕಾರಣಕ್ಕಾಗಿ ಮಹಿಳೆಯೊಬ್ಬಳನ್ನು ಆಕೆಯ ಕುಟುಂಬ ಸದಸ್ಯರೇ ಜೀವಂತವಾಗಿ ಸುಟ್ಟುಹಾಕಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಮುಸ್ಲಿಂ ವ್ಯಕ್ತಿಯೊಂದಿಗಿನ ಸಂಬಂಧ ಹೊಂದಿದ್ದಕ್ಕೆ ಕೋಪಗೊಂಡಿದ್ದ ಕುಟುಂಬಸ್ಥರು ಮಹಿಳೆಯನ್ನು ಕೊಲೆ ಮಾಡಲು ಕಾಂಟ್ರಾಕ್ಟ್ ಕಿಲ್ಲರ್ ವರುಣ್ ತಿವಾರಿ ಎಂಬಾತನನ್ನು ನೇಮಿಸಿ ₹ 1.5 ಲಕ್ಷ ನೀಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಸಂತ್ರಸ್ತೆಯ ತಂದೆ ಕೈಲಾಶ್ ಯಾದವ್, ಅಣ್ಣ ಅಜಿತ್ ಯಾದವ್, ಮಾವ ಸತ್ಯಪ್ರಕಾಶ್ ಯಾದವ್ ಮತ್ತು ಸೀತಾರಾಮ್ ಯಾದವ್ ಎಂಬುವವರನ್ನು ಭಾನುವಾರ ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಲಾದ ಪೆಟ್ರೋಲ್ ಕಂಟೈನರ್ ಮತ್ತು ಮೋಟಾರ್ ಸೈಕಲ್‌ಅನ್ನು ವಶಪಡಿಸಿಕೊಳ್ಳಲಾಗಿದೆ. ಕಾಟ್ರಾಂಕ್ಟ್ ಕಿಲ್ಲರ್‌ಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಫೆಬ್ರವರಿ 4 ರಂದು ಧಂಗಾಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಜಿಗಿನಾ ಗ್ರಾಮದಲ್ಲಿ ಯುವತಿಯ ಅರ್ಧ ಸುಟ್ಟ ಶವ ಪತ್ತೆಯಾಗಿತ್ತು. ಸ್ಥಳೀಯ ಪೊಲೀಸರು, ಸಿಸಿಟಿವಿ ದೃಶ್ಯಾವಳಿ, ಕ್ಷೇತ್ರ ಘಟಕ ಮತ್ತು ಶ್ವಾನ ದಳದ ಸಹಾಯದಿಂದ ಶವವನ್ನು ಗೋರಖ್‌ಪುರದ ಬೆಲ್ಘಾಟ್ ಪ್ರದೇಶದ ರಂಜನಾ ಯಾದವ್ ಎಂದು ಗುರುತಿಸಲಾಯಿತು ಎಂದು ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸಂತ್ರಸ್ತೆಯ ತಂದೆಯು ಪೊಲೀಸರೊಂದಿಗೆ ನೀಡಿರುವ ಮಾಹಿತಿ ಪ್ರಕಾರ, ಮಗಳು ಮುಸ್ಲಿಂ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಳು. ಅವಳು ತನ್ನ ಪ್ರೇಮಿಯನ್ನು ಬಿಡಲು ಸಿದ್ಧವಿಲ್ಲದಿದ್ದಾಗ, ಆತ ತನ್ನ ಮಗ ಮತ್ತು ಅಳಿಯನೊಂದಿಗೆ ಸೇರಿ ಮಾಹುಲಿಯಿಂದ ಗುತ್ತಿಗೆ ಕೊಲೆಗಾರನನ್ನು ನೇಮಿಸಿಕೊಂಡಿರುವುದಾಗಿ ತಿಳಿಸಿದ್ದಾನೆ.

ಪೊಲೀಸರ ಪ್ರಕಾರ, ಆರೋಪಿಗಳಲ್ಲಿ ಒಬ್ಬರು ಫೆಬ್ರುವರಿ 3 ರಂದು ಜಿಗಿನಾ ಗ್ರಾಮದ ನಿರ್ಜನ ಸ್ಥಳಕ್ಕೆ ಮೋಟಾರ್ ಸೈಕಲ್‌ನಲ್ಲಿ ಯುವತಿಯನ್ನು ಕರೆದೊಯ್ದಿದ್ದಾರೆ. ಈ ವೇಳೆ ಇತರ ಆರೋಪಿಗಳು ಅವರೊಂದಿಗೆ ಸೇರಿಕೊಂಡು ಮಹಿಳೆಯ ಕೈ ಮತ್ತು ಬಾಯಿಯನ್ನು ಕಟ್ಟಿದ್ದಾರೆ. ನಂತರ ಆಕೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT