ಪುದುಚೇರಿ: ರಾಷ್ಟ್ರೀಯ ಅರ್ಹತಾ ಪರೀಕ್ಷೆಯನ್ನು (ನೀಟ್) ಸ್ಥಗಿತಗೊಳಿಸುವಂತೆ ಕೋರಿ ಸರ್ಕಾರದ ಪರವಾಗಿ ಶಾಸಕ ಆರ್ಕೆಆರ್ ಅನಂತರಾಮನ್ ಅವರು ಸುಪ್ರೀಂಕೋರ್ಟ್ಗೆ ಮೇಲ್ಮನವಿಸಲ್ಲಿಸಿದ್ದಾರೆ.
‘ನೀಟ್ ಪರೀಕ್ಷೆಯನ್ನು ಸ್ಥಗಿತಗೊಳಿಸುವಂತೆ ಕೋರಿ ನಾವುಪುದುಚೇರಿ ಸರ್ಕಾರದ ಪರವಾಗಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದೇವೆ. ಇದು ನನ್ನ ಹೆಸರಿನಲ್ಲಿಯೇ ದಾಖಲಾಗಿದೆ’ ಎಂದು ಹೇಳಿದ್ದಾರೆ.
‘ಮೇಲ್ಮನವಿಯ ವಿಚಾರಣೆ ಮುಂದಿನವಾರ ನಡೆಯಲಿದೆ. ವಿದ್ಯಾರ್ಥಿ ಸಮುದಾಯದ ಸುರಕ್ಷತೆ ದೃಷ್ಟಿಯಿಂದ ಸುಪ್ರೀಂ ಕೋರ್ಟ್ನಿಂದ ಉತ್ತಮ ಆದೇಶಹೊರಬರಲಿದೆ ಎಂಬ ಭರವಸೆಯಿದೆ’ ಎಂದೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಏತನ್ಮಧ್ಯೆ, ಸೆಪ್ಟೆಂಬರ್ನಲ್ಲಿ ಜೆಇಇ ಮತ್ತು ನೀಟ್ ಪರೀಕ್ಷೆ ನಡೆಸುವ ಕೇಂದ್ರ ಸರ್ಕಾರದ ನಿರ್ಧಾರದ ವಿರೋಧಿಸಿ ಮತ್ತು ಕೋವಿಡ್–19 ಸಾಂಕ್ರಾಮಿಕವನ್ನು ಗಮನದಲ್ಲಿರಿಸಿ ಪರೀಕ್ಷೆಯನ್ನು ಮುಂದೂಡಬೇಕು ಎಂದು ಒತ್ತಾಯಿಸಿಕಾಂಗ್ರೆಸ್ ಪಕ್ಷ ಮತ್ತು ಅದರ ವಿದ್ಯಾರ್ಥಿ ಘಟಕ ನ್ಯಾಷನಲ್ ಸ್ಟುಡೆಂಟ್ ಯೂನಿಯನ್ ಆಫ್ ಇಂಡಿಯಾ (ಎನ್ಎಸ್ಯುಇ) ಶುಕ್ರವಾರ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಿತ್ತು.
ಕೇಂದ್ರದ ನಿರ್ಧಾರದ ವಿರುದ್ಧದೆಹಲಿ, ತಮಿಳುನಾಡು, ರಾಜಸ್ಥಾನ, ಕರ್ನಾಟಕ, ಉತ್ತರಾಖಂಡ್, ಬಿಹಾರ, ಒಡಿಶಾ ಮತ್ತು ಗುಜರಾತ್ನಲ್ಲಿ ಪ್ರತಿಭಟನೆ ಜರುಗಿತ್ತು.
ಕೋವಿಡ್–19 ನಡುವೆಪರೀಕ್ಷೆಗಳನ್ನು ಆಯೋಜಿಸುವುದಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಭವಿಷ್ಯವು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಅವರು ಗುರುವಾರ ಹೇಳಿದ್ದರು.ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸುವುದರೊಂದಿಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದೂ ಹೇಳಿದ್ದರು.
ಜೆಇಇ ಪರೀಕ್ಷೆಗಳನ್ನು ಸೆ.1ರಿಂದ 6ರೊಳಗೆ ಮತ್ತುನೀಟ್ ಪರೀಕ್ಷೆಯನ್ನು ಸೆ.13ರಂದು ನಡೆಸಲು ದಿನಾಂಕ ನಿಗದಿಪಡಿಸಲಾಗಿದೆ.