ಪಟ್ನಾ (ಪಿಟಿಐ): ಬಿಹಾರದ ಶಿಕ್ಷಣ ಸಚಿವ ಚಂದ್ರಶೇಖರ್ ಅವರು ‘ರಾಮಚರಿತ ಮಾನಸ’ ಕುರಿತು ನೀಡಿರುವ ವಿವಾದಾತ್ಮಕ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ನಿತೀಶ್ ಕುಮಾರ್, ‘ಸರ್ಕಾರ ಯಾರೊಬ್ಬರ ಧಾರ್ಮಿಕ ಆಚರಣೆಗಳಲ್ಲೂ ಹಸ್ತಕ್ಷೇಪ ಮಾಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
ಅರ್ವಲ್ ಜಿಲ್ಲೆಯಲ್ಲಿ ‘ಸದ್ಭಾವನಾ ಯಾತ್ರೆ’ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರತಿಯೊಬ್ಬರಿಗೂ ಅವರ ನಂಬಿಕೆಯನ್ನು ಅನುಸರಿಸುವ ಹಕ್ಕಿದೆ. ಪ್ರತಿಯೊಬ್ಬರ ಧರ್ಮವನ್ನೂ ಗೌರವಿಸಬೇಕು’ ಎಂದು ಹೇಳಿದರು.
ರಾಮಚರಿತ ಮಾನಸ ಗ್ರಂಥವು ಸಮಾಜದಲ್ಲಿ ದ್ವೇಷ ಮತ್ತು ಒಡಕನ್ನು ಮೂಡಿಸುತ್ತದೆ ಎಂದು ಚಂದ್ರಶೇಖರ್ ಹೇಳಿಕೆ ನೀಡಿದ್ದರು. ಇದು ಬಾರೀ ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು.