ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಶಕದ ಸಂಭ್ರಮ: ಮಹತ್ತರ ಸಾಧನೆಯ ‘ಮಾಹೆ’ ಪ್ರಸಾರಾಂಗ

Last Updated 18 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಕಲಿಕೆಯೊಂದೇ ವಿಶ್ವವಿದ್ಯಾಲಯದ ಉದ್ದೇಶವಾಗಬಾರದು, ಜ್ಞಾನದ ಪ್ರಸರಣವೂ ಮುಖ್ಯವಾಗಿರಬೇಕು, ವಾಚನ ಸಂಸ್ಕೃತಿಯೂ ಬೆಳೆಯಬೇಕು ಎಂಬ ಸದಾಶಯದೊಂದಿಗೆ ಆರಂಭವಾದ ‘ಮಣಿಪಾಲ್‌ ಯೂನಿವರ್ಸಲ್‌ ಪ್ರೆಸ್‌’ಗೆ ದಶಮಾನದ ಸಡಗರ. ಮಣಿಪಾಲ್ ಯೂನಿವರ್ಸಿಟಿ ಎಂದು ಪ್ರಸಿದ್ಧಿ ಹೊಂದಿರುವ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್(ಮಾಹೆ) ಸಂಸ್ಥೆಯ ಸ್ವಂತ ಪ್ರಸಾರಾಂಗ ಆರಂಭಿಸಿ ಅಕಾಡೆಮಿಕ್, ನಾನ್‌ ಅಕಾಡೆಮಿಕ್ ಸೇರಿದಂತೆ ಹತ್ತು ಹಲವು ಕ್ಷೇತ್ರಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಪ್ರಕಟಿಸುತ್ತ ಬಂದಿದೆ. ಪ್ರಕಾಶನವನ್ನು ವಿವಿಧ ಭಾರತೀಯ ಭಾಷೆಗಳಿಗೆ ವಿಸ್ತರಿಸುತ್ತಿದೆ.

ವಿಶ್ವವಿದ್ಯಾಲಯದ ಕಲ್ಪನೆ ಬಹಳ ಸಂಕೀರ್ಣವಾಗಿದ್ದು, ಜ್ಞಾನದ ಆಕರಗಳನ್ನು ಮುದ್ರಿಸುವುದು, ದಾಖಲಿಸುವುದು, ಪಸರಿಸುವುದು ಬಹಳ ಮುಖ್ಯ ಪ್ರಕ್ರಿಯೆ. ಈ ಕಾರ್ಯ ಕೆಲವು ಸರ್ಕಾರಿ ವಿಶ್ವವಿದ್ಯಾಲಯಗಳ ಪ್ರಸಾರಾಂಗಗಳಲ್ಲಿ ನಡೆಯುತ್ತಿರಬಹುದು. ಆದರೆ, ಖಾಸಗಿ ವಿಶ್ವವಿದ್ಯಾಲಯವೊಂದು ಪ್ರಸಾರಾಂಗದ ಮೂಲಕ ಪ್ರಕಟಣೆ ವಿಭಾಗದಲ್ಲಿ ಕ್ರಿಯಾಶೀಲವಾಗಿರುವ ವಿರಳ ಉದಾಹರಣೆಯನ್ನು ಮಣಿಪಾಲ ವಿ.ವಿ. ಪ್ರಸಾರಾಂಗದಲ್ಲಿ ಕಾಣಬಹುದು.

ಡಾ.ಟಿಎಂಎ ಪೈ ಅವರ ಜ್ಞಾನ ಪ್ರಸರಣದ ಕನಸಾಗಿದ್ದ ಮಾಹೆ ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗವು ಅವರು ಕಾಲವಾದ ಹಲವು ವರ್ಷಗಳ ಬಳಿಕ ಸಾಕಾರವಾಗಿದೆ. ಮಣಿಪಾಲ ವಿ.ವಿ. ಸಾಧನೆಯ ಹಾದಿಯಲ್ಲಿ ಮಣಿಪಾಲ ಯೂನಿವರ್ಸಲ್ ಪ್ರೆಸ್ (ಎಂಯುಪಿ) ಮುಖ್ಯವಾದ ಮೈಲಿಗಲ್ಲು ಎಂದೇ ಹೇಳಬಹುದು.

ಎಂಯುಪಿ ಮೊದಲ ಅಧ್ಯಾಯ ತೆರೆದುಕೊಂಡದ್ದು 2011ರಲ್ಲಿ. ಆಗ ಮಣಿಪಾಲ್ ವಿ.ವಿ. ಸಹ ಉಪ ಕುಲಪತಿ ಆಗಿದ್ದ ಡಾ.ಎಚ್. ವಿನೋದ ಭಟ್ ಅವರು ವಿಶ್ವವಿದ್ಯಾಲಯವೇ ಸ್ವಂತ ಪಬ್ಲಿಕೇಶನ್ ವಿಭಾಗ ಹೊಂದಬೇಕೆಂಬ ಯೋಜನೆಯನ್ನು ಮುನ್ನೆಲೆಗೆ ತಂದರು. ಮಣಿಪಾಲ್ ಸೆಂಟರ್ ಫಾರ್ ಯುರೋಪಿಯನ್ ಸ್ಟಡೀಸ್‌ನ ಮುಖ್ಯಸ್ಥೆ ಡಾ. ನೀತಾ ಇನಾಂದಾರ್ ಅವರ ಹೆಗಲಿಗೆ ಮುಖ್ಯ ಸಂಪಾದಕತ್ವದ ಹೊಣೆ ವಹಿಸಿದರು.

ತತ್ವಶಾಸ್ತ್ರಜ್ಞ ಡಾ. ಶ್ರೀನಿವಾಸ ವರಖೇಡಿ ಅವರ ‘ದ ಪಾಥ್ ಆಫ್ ಪ್ರೂಫ್ಸ್‌’ ಗ್ರಂಥ ಪ್ರಕಟಿಸುವ ಮೂಲಕ ಮಣಿಪಾಲ ವಿ.ವಿ. ಪ್ರಸಾರಾಂಗ ಶುಭನಾಂದಿಯಾಯಿತು. ನಂತರ ಪ್ರಕಟಣೆಯ ಪರ್ವ ನಿರಂತರವಾಯಿತು. ಮುಂದೆ, ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು ಹಾಗೂ ಸಿಬ್ಬಂದಿಗೆ ಪುಸ್ತಕಗಳನ್ನು ಪ್ರಕಟಿಸಲು ವೇದಿಕೆ ಒದಗಿಸಿತು.

ಪ್ರಸಿದ್ಧ ಬರಹಗಾರರು, ಲೇಖಕರು, ವಿದೇಶಗಳ ಚಿಂತಕರು ತಮ್ಮ ಕೃತಿಗಳಿಗೆ ಮಣಿಪಾಲ್ ಯೂನಿವರ್ಸಲ್ ಪ್ರೆಸ್‌ನಲ್ಲಿ ಬೆಳಕು ಕಾಣಿಸಿದರು. ಸ್ಧಳೀಯ ಬರಹಗಾರರಿಗೂ ಎಂಯುಪಿ ಬಾಗಿಲು ತೆರೆಯಿತು. ಅನುವಾದಕರಿಗೆ ಆದ್ಯತೆ ನೀಡಿತು. ವಿದ್ಯಾರ್ಥಿಗಳಿಗೆ ಅಭಿವ್ಯಕ್ತಿಯ ಅವಕಾಶ ನೀಡಲಾಯಿತು.

ಕವಿ ನಿಸಾರ್ ಅಹಮದ್ ಅವರ ಕೃತಿಯನ್ನೂ ಎಂಯುಪಿ ಪ್ರಕಟಿಸಿದೆ. ತುಳುವಿನ ಸತೀ ಕಮಲೆ ಕಾದಂಬರಿ ಕನ್ನಡಕ್ಕೆ ಬಂದಿದೆ; ಚಂದ್ರಶೇಖರ ಕಂಬಾರರು ತಮ್ಮ ಅನುವಾದಿತ ಕೃತಿಯ ಮೂಲಕ ತುಳು ಭಾಷೆಯಲ್ಲಿ ಅವಕಾಶ ಕಂಡುಕೊಂಡಿದ್ದಾರೆ. ಶಿವರಾಮ ಕಾರಂತರ ಚೋಮನ ದುಡಿ ಸಂಸ್ಕೃತದಲ್ಲಿ ಸದ್ದು ಮಾಡಿದೆ. ಕನ್ನಡದ ರಂಗಭೂಮಿಯ ಕುರಿತು ಕೆ.ವಿ. ಅಕ್ಷರ ಇಂಗ್ಲಿಷ್‌ನಲ್ಲಿ ಕೃತಿ ಪ್ರಕಟಿಸಿದ್ದಾರೆ. ಪ್ರೊ. ನೀತಾ ಇನಾಂದಾರ್ ಮರಾಠಿಯ ಯೂಟರ್ನ್ ನಾಟಕವನ್ನು ಕನ್ನಡಕ್ಕೆ ತಂದಿದ್ದಾರೆ.

ಡಾ. ಷ. ಶೆಟ್ಟರ್, ಎಚ್.ಎಸ್. ಶಿವಪ್ರಕಾಶ್, ಮನು ಚಕ್ರವರ್ತಿ ಮುಂತಾದವರ ಕೃತಿಗಳನ್ನು ಎಂಯುಪಿ ಪ್ರಕಟಿಸಿದೆ. ಪುಸ್ತಕಗಳು, ಜರ್ನಲ್‌ಗಳು ಸೇರಿದರೆ ಇದುವರೆಗೆ 250ಕ್ಕಿಂತಲೂ ಅಧಿಕ ಪ್ರಕಟಣೆಗಳಾಗುತ್ತವೆ. ಟಿ.ಪಿ. ಅಶೋಕ ಅವರ ಕಥನ ಭಾರತಿ ಕೃತಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನವಾಗಿದೆ. ಮೈತ್ರೇಯಿ ಕರ್ನೂರ್ ಅನುವಾದಿಸಿದ ಶ್ರೀನಿವಾಸ ವೈದ್ಯ ಅವರ ಕೃತಿ ‘ಎ ಹ್ಯಾಂಡ್‌ಫುಲ್ ಸೆಸೇಮೆ’ಗೆ ಕುವೆಂಪು ಭಾಷಾಭಾರತಿ 2018ನೇ ಸಾಲಿನ ಪುಸ್ತಕ ಬಹುಮಾನ ಲಭಿಸಿದೆ. ಎನ್.ಟಿ. ಭಟ್ ಅನುವಾದಿಸಿದ ‘ದ ಅದರ್ ಫೇಸ್ ಕೃತಿ’ಗೆ 2018ರ ಕರ್ನಾಟಕ ಸಾಹಿತ್ಯ ಅಕಾಡೆಮಿ- ಅಮೆರಿಕನ್ನಡಿಗರ ದತ್ತಿ ನಿಧಿ ಬಹುಮಾನ ಬಂದಿದೆ.

ಎಂಯುಪಿಯಲ್ಲಿ ಪ್ರಕಟಗೊಳ್ಳುವ ಪುಸ್ತಕಗಳ ಆಯ್ಕೆಗೆ ನಿರ್ದಿಷ್ಟ ವಿಧಾನವಿದೆ. ಪ್ರತಿ ಕೃತಿಯನ್ನು ಪ್ರಕಟಣೆ ಪೂರ್ವದಲ್ಲಿ ಉಪ ಕುಲಪತಿಗಳ ನೇತೃತ್ವದ ಸಂಪಾದಕೀಯ ಮಂಡಳಿಯಲ್ಲಿ ಸಮೀಕ್ಷೆಗೊಳಪಡಿಸ ಲಾಗುತ್ತದೆ. ಕೆಲವೊಮ್ಮೆ ವಿಷಯ ತಜ್ಞರು ಕೃತಿಯ ಮರುನಿರೂಪಣೆಗೆ ಸಲಹೆ ಕೊಡುತ್ತಾರೆ. ಕೆಲವು ಪುಸ್ತಕಗಳು ಪ್ರಕಟಣೆಗೆ ನಿರಾಕರಣೆಯಾಗುವುದೂ ಇದೆ. ಪುಸ್ತಕಗಳು ಪ್ರಕಟಣೆಗೆ ಸ್ವೀಕೃತವಾದರೆ ಪ್ರತಿ ಸಂಪಾದನೆ, ಕರಡು ತಿದ್ದುವಿಕೆ, ಪುಟವಿನ್ಯಾಸ ಇತ್ಯಾದಿ ಹಂತಗಳ ಮೂಲಕ ಮುದ್ರಣಕ್ಕೆ ಕಳುಹಿಸಲಾಗುತ್ತದೆ. ಎಂಯುಪಿಯ ಪ್ರಧಾನ ಸಂಪಾದಕಿ ಡಾ. ನೀತಾ ಇನಾಂದಾರ್ ನೇತೃತ್ವದಲ್ಲಿ ಸಂಪಾದಕರ, ವಿನ್ಯಾಸಕರ, ಮಾರುಕಟ್ಟೆ ನಿರ್ವಾಹಕರ ತಂಡ ಕೆಲಸ ನಿರ್ವಹಿಸುತ್ತದೆ.

ಎಂಯುಪಿ ‘ಮಣಿಪಾಲ್ ಇಂಟರ್‌ನ್ಯಾಶನಲ್ ಲಿಟರೇಚರ್ ಆ್ಯಂಡ್ ಆರ್ಟ್ ಪ್ಲ್ಯಾಟ್‌ಫಾರ್ಮ್-ಮಿಲಾಪ್’ ಎಂಬ ಉತ್ಸವವನ್ನು ಸಂಯೋಜಿಸುವ ಹೊಣೆಯನ್ನು ಹೊತ್ತುಕೊಂಡಿದೆ. ಕೋವಿಡ್ ಸವಾಲು ಪ್ರಕಾಶನ ಸಂಸ್ಥೆಗಳ ಮೇಲೂ ಪರಿಣಾಮ ಬೀರಿದೆ. ಎಂಯುಪಿಯಲ್ಲಿ ಪುಸ್ತಕಗಳ ಪ್ರಕಟಣೆ ಕಡಿಮೆಯಾಗಿರಬಹುದು, ಆದರೆ, ಮಾರಾಟ ಎಂದಿನಂತೆಯೇ ಇದೆ. ಎಂಯುಪಿಯ ಜೊತೆಗೆ ಲೇಖಕರ ದೊಡ್ಡ ತಂಡವಿರುವಂತೆಯೇ ದೊಡ್ಡದೊಂದು ವಾಚಕ ಸಮುದಾಯವೂ ಇದರ ಬೆಂಬಲಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT