ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವನದ ಪ್ರತಿ ಹಂತವೂ ಅನುಭವವೇ

Last Updated 15 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ನಾನು ಹುಟ್ಟಿದ್ದು ಮೈಸೂರಿನ ಮಿಷನ್ ಆಸ್ಪತ್ರೆಯಲ್ಲಿ. ನಮ್ಮ ತಂದೆ ವೆಂಕಟರಾಮಯ್ಯ, ವೃತ್ತಿಯಲ್ಲಿ ವಕೀಲರು. ತಾಯಿ ಲಲಿತಾಂಬಾ. ನಾನು ಮೂರು ವರ್ಷದವಳಿರುವಾಗ ನನ್ನನ್ನು ಗುರುಕುಲಕ್ಕೆ ಸೇರಿಸಿದರು. ಆಗೆಲ್ಲಾ ಈಗಿನಂತೆ ಒಂದೊಂದೇ ತರಗತಿಗೆ ಪಾಸ್‌ ಮಾಡುವುದು ಇರಲಿಲ್ಲ. ಡಬ್ಬಲ್ ಪ್ರಮೋಶನ್ ತರಹ ಇತ್ತು. ಹೀಗಾಗಿ ನನ್ನನ್ನು ನೇರವಾಗಿ ಒಂದನೇ ತರಗತಿಯಿಂದ ಮೂರನೇ ತರಗತಿಗೆ ಪಾಸ್‌ ಮಾಡಿದರು. ಅಲ್ಲಿಗೆ ನನ್ನ ಓದು ಮುಗಿಯಿತು. ಆಮೇಲೆ ಪ್ರಾಥಮಿಕ ಶಿಕ್ಷಣವೂ ಸಿಗಲಿಲ್ಲ.

ನನಗೆ 9 ವರ್ಷವಿದ್ದಾಗ ತಂದೆಯೊಂದಿಗೆ ತಿಪಟೂರಿಗೆ ಬಂದೆ. ಅಲ್ಲಿ ನನಗೆ ಮನೆಯಲ್ಲೇ ಒಬ್ಬ ಟ್ಯೂಟರ್ (ಬೋಧಕ) ಅನ್ನು ಕರೆಸಿ ಶಿಕ್ಷಣ ಕೊಡಿಸಿದರು. ಆಗ ಲೋಯರ್ ಸೆಕೆಂಡರಿ ಅಂತ ಇತ್ತು. ಆ ಪರೀಕ್ಷೆ ಪಾಸು ಮಾಡಿದೆ. ಆಗ ನನಗೆ ಹತ್ತು ವರ್ಷ. ಅಲ್ಲಿಂದ ತಿಪಟೂರಿನ ಬಾಲಕಿಯರ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ತನಕ ಓದಿದೆ. ಆಗ ನನಗೆ ಹದಿಮೂರು ವರ್ಷ. ಆದರೆ ಮುಂದೆ ಓದಲು ಅಲ್ಲಿ ಕಾಲೇಜು ಇರಲಿಲ್ಲ. ಚಿಕ್ಕ ಹುಡುಗಿ ಎಂಬ ಕಾರಣಕ್ಕೆ ದೂರದ ಊರಿಗೆ ಕಳುಹಿಸಿ ಓದಿಸಲು ಮನೆಯವರು ಇಷ್ಟಪಡಲಿಲ್ಲ. ಹಾಗಾಗಿ ಎಸ್‌ಎಸ್‌ಎಲ್‌ಸಿ ಮುಗಿಸಿ ಮನೆಯಲ್ಲೇ ಕುಳಿತೆ.

ನನಗೆ 14 ವರ್ಷ ತುಂಬಿದಾಗ ಮದುವೆ ಆಯ್ತು. ನಂತರ ಶಿಕ್ಷಣ ಮುಂದುವರಿಸುವ ಆಸೆ ಇತ್ತು. ಆದರೆ ಕಾರಣಾಂತರದಿಂದ ಓದು ಮುಂದುವರಿಸಲಾಗಲಿಲ್ಲ. ಆದರೆ ನನ್ನಲ್ಲಿದ್ದ ಓದುವ ಹಂಬಲಕ್ಕೆ ಕಡಿವಾಣ ಬೀಳಲಿಲ್ಲ. ನನಗೆ ಬಾಲ್ಯದಿಂದಲೂ ಓದುವುದೆಂದರೆ ಬಹಳ ಇಷ್ಟ. ಕನ್ನಡ, ಇಂಗ್ಲಿಷ್ ಎಲ್ಲಾ ಪುಸ್ತಕಗಳನ್ನು ಓದುತ್ತಿದ್ದೆ. ಆದರೆ ಕಾಲೇಜು, ಉದ್ಯೋಗ ಸಾಧ್ಯವಾಗಿರಲಿಲ್ಲ. ನಾನು 35ನೇ ವಯಸ್ಸಿನಲ್ಲಿ ಇಂಗ್ಲಿಷ್ ವಿಷಯದಲ್ಲಿ ಎಂ.ಎ ಮಾಡಿಕೊಂಡೆ. ಇಂಗ್ಲಿಷ್‌ನಲ್ಲೇ ಎಂ.ಎ ಮಾಡಬೇಕು ಎಂಬುದು ನನ್ನ ಕನಸಾಗಿತ್ತು.

ಕಾರಣ ನಮ್ಮ ತಂದೆ ಯಾವಾಗಲು ಹೇಳುತ್ತಿದ್ದರು ಓದಿದ್ರೆ ಶೇಕ್ಸ್‌ಪಿಯರ್‌ನನ್ನು ಓದಬೇಕು, ಬೇರೆಯವರದೆಲ್ಲಾ ಏನು ಓದುವುದು ಎಂದು. ಅವರ ಆ ಮಾತು ನನ್ನಲ್ಲಿ ಅಚ್ಚರಿ ಮೂಡಿಸಿತ್ತು. ನನ್ನ ಅದೃಷ್ಟಕ್ಕೋ ಏನೋ 1976ರಲ್ಲಿ ಮೊದಲ ಬಾರಿ ಮೈಸೂರು ವಿಶ್ವವಿದ್ಯಾಲಯದವರು ಮುಕ್ತ ವಿಶ್ವವಿದ್ಯಾಲಯ ಆರಂಭಿಸಿದ್ದರು. ಅಲ್ಲಿ ಎಂ.ಎ ಓದಲು ಎಸ್‌ಎಸ್‌ಎಲ್‌ಸಿ ಪಾಸು ಮಾಡಿರಬೇಕು ಮತ್ತು 35 ವರ್ಷವಾಗಿರಬೇಕು ಎಂದಿದ್ದರು. ಬೇರೆ ಯಾವುದೇ ವಿದ್ಯಾರ್ಹತೆ ಇಲ್ಲದೇ, ಪರೀಕ್ಷೆಗಳನ್ನು ನಡೆಸದೆ ಎಂ.ಎಗೆ ಸೇರಲು ಅವಕಾಶ ಸಿಕ್ಕಿತ್ತು.

ಎಂ.ಎ ಮುಗಿಸಿದ ಮೇಲೆ ಕಾಲೇಜುಗಳಲ್ಲಿ ಕೆಲಸ ಮಾಡಿದೆ. ಎಂ.ಎ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದೆ. ಈ ನಡುವೆ ಬರವಣಿಗೆಯ ಹವ್ಯಾಸವನ್ನು ಮುಂದುವರಿಸಿದ್ದೆ. ಆದರೆ ನಾನು ಬರೆದಿದ್ದನ್ನು ಪ್ರಕಟಿಸುತ್ತಿರಲಿಲ್ಲ. ಪ್ರಕಟ ಮಾಡುವ ಹಂಬಲವೂ ಇರಲಿಲ್ಲ. 1998ರಲ್ಲಿ ನನ್ನ ಮಗನಿಗೆ ಬೆಂಗಳೂರಿಗೆ ವರ್ಗವಾದ ಮೇಲೆ ನಾನು ಅವನೊಂದಿಗೆ ಬೆಂಗಳೂರಿಗೆ ಬಂದೆ. ಇಲ್ಲಿಗೆ ಬಂದ ಮೇಲೆ ಯಾರೋ ಒಬ್ಬರು ನಾನು ಬರೆದ ಬರಹಗಳನ್ನು ನೋಡಿ, ‘ಇಷ್ಟೊಂದು ಬರೆದಿಟ್ಟುಕೊಂಡಿದ್ದೀಯಾ ಇದನೆಲ್ಲಾ ಪ್ರಕಟ ಮಾಡು’ ಎಂದರು. ಅವರ ಮಾತಿನಿಂದ ಪ್ರೇರಣೆಗೊಂಡು ಮೊದಲಿಗೆ ಎರಡು ಪುಸ್ತಕಗಳನ್ನು ಪ್ರಕಟ ಮಾಡಿದೆ. ಆಮೇಲೆ ಪತ್ರಿಕೆಗಳಿಗೆ ಬರೆಯಲು ಆರಂಭಿಸಿದೆ. ನನಗೆ ಯಾವಾಗಲೂ ಇಂಗ್ಲಿಷ್ ಸಾಹಿತ್ಯ ಹಾಗೂ ವಿಮರ್ಶೆಗಳ ಮೇಲೆ ಒಲವು ಜಾಸ್ತಿಯಿತ್ತು. ಹಾಗಾಗಿ ಅದನ್ನು ಬರೆಯುತ್ತಿದ್ದೆ. ಬಹಳ ಜನ ಅದನ್ನು ಇಷ್ಟಪಡುತ್ತಿದ್ದರು.

ಎಂ.ಎ ಮಾಡುವಾಗ ನನಗೆ ತಿಳಿದ ಒಂದು ಅಂಶ ಎಂದರೆ ಯಾವುದೇ ಒಬ್ಬ ಲೇಖಕನ ಬಗ್ಗೆ ಬರೆಯುವಾಗ ಅವನ ಎಲ್ಲಾ ಬರಹಗಳನ್ನು ಓದಿ, ವಿರ್ಮಶಾತ್ಮಕವಾಗಿ ಬರೆಯಬೇಕು ಎಂಬುದು. ನಂತರ ನಾನು ಯಾವುದೇ ಲೇಖಕರ ಬಗ್ಗೆ ಬರೆಯಬೇಕಾದರೂ  ಆ ಲೇಖಕರ 6 ರಿಂದ 7 ಪುಸ್ತಕಗಳನ್ನು ಓದದೇ ಅವರ ಬಗ್ಗೆ ಬರೆಯುತ್ತಿರಲಿಲ್ಲ. ಅದೇ ರೀತಿ ಖ್ಯಾತ ಕಾದಂಬರಿಕಾರ ಎಸ್‌.ಎಲ್. ಭೈರಪ್ಪ ಅವರ ಕಾದಂಬರಿಗಳನ್ನು ಆಧರಿಸಿ ‘ಯುಗಸಾಕ್ಷಿ’ ಪುಸ್ತಕವನ್ನು ಬರೆದಿದ್ದೇನೆ.

ನನಗೆ ಚಿಕ್ಕ ವಯಸ್ಸಿನಿಂದಲೂ ಪದ್ಯ ಬರೆಯುವ ಹುಚ್ಚಿತ್ತು. ಆದರೆ ಅದನ್ನು ಪ್ರಕಟ ಮಾಡಲಿಲ್ಲ. ಈ ರೀತಿ ವಿಮರ್ಶೆ ಹಾಗೂ ಪದ್ಯಗಳ ಮೂಲಕ ಬರವಣಿಗೆಯ ಕ್ಷೇತ್ರಕ್ಕೆ ಕಾಲಿರಿಸಿದೆ. ಸಾಹಿತ್ಯದಲ್ಲಿ ಆಸಕ್ತಿ ಮೂಡಲು ಕಾರಣವೇ ಓದು ಎಂದರೂ ತಪ್ಪಾಗಲಾರದು.

ಇನ್ನು ನನ್ನ ವಿದ್ಯಾಭ್ಯಾಸದ ಬಗ್ಗೆ ಹೇಳುವುದಾದರೆ ನನಗೆ ಯಾವತ್ತು ನಾನು ಓದಿದ್ದು ತಡವಾಯಿತು ಎಂದು ಅನಿಸಿದ್ದೇ ಇಲ್ಲ. ಯಾಕೆಂದರೆ ಈ ಬದುಕು ನಾವು ಅಂದುಕೊಂಡ ಹಾಗೆ ಅಲ್ಲ. ಜೀವನ ಮೊದಲೇ ವಿನ್ಯಾಸಗೊಂಡಿರುತ್ತದೆ. ಆ ವಿನ್ಯಾಸದಲ್ಲಿ ಯಾವುದು ಆಗಬೇಕೋ ಅದೇ ಆಗುತ್ತದೆ ವಿನಾ ಎಲ್ಲಾ ಮುಗಿದ ಮೇಲೆ ಹೀಗಾಯ್ತಲ್ಲ, ಹೀಗಾಗಬೇಕಿತ್ತಲ್ಲ ಎಂದುಕೊಳ್ಳುವುದರಲ್ಲಿ ಅರ್ಥವಿಲ್ಲ. ನಾನು ಕೆಲವೊಮ್ಮೆ ಅಂದುಕೊಳ್ಳುತ್ತೇನೆ ನಾನು ಕಾಲೇಜಿಗೆ ಹೋಗಿ ಓದಿದ್ದರೂ ಚೆನ್ನಾಗಿ ಓದಿ ಪಾಸು ಮಾಡುತ್ತಿದ್ದೆ ಎಂದು ಯಾರಿಗೆ ಗೊತ್ತು? ಹಾಗಾಗಿ ಏನಾಗಬೇಕಿತ್ತೋ ಅದೇ ಆಗಿದೆ ಎಂದು. ನಾನು ಜೀವನದಲ್ಲಿ ಯಾವತ್ತು ಪಶ್ಚಾತ್ತಾಪ ಪಡಲೇ ಇಲ್ಲ. ಯಾರೇ ಆಗಲಿ ಜೀವನದಲ್ಲಿ ಪಶ್ಚಾತ್ತಾಪ ಪಡುವ ಅಗತ್ಯವಿಲ್ಲ ಎಂಬುದು ನನ್ನ ಅನಿಸಿಕೆ.

ಬರವಣಿಗೆಯ ವಿಷಯಕ್ಕೆ ಬಂದರೆ ಮೊದಲು ಅನುವಾದ ಮಾಡಿದ್ದು ಭೈರಪ್ಪನವರ ‘ನೆಲೆ’ ಕಾದಂಬರಿ. ಆ ಪುಸಕ್ತವನ್ನೇ ಯಾಕೆ ಮಾಡಬೇಕು ಎಂದು ಅನಿಸಿತು ಎಂದರೆ ಆ ಪುಸಕ್ತದ ರಚನೆ, ಯೋಜನೆ, ವಿನ್ಯಾಸ ಎಲ್ಲವೂ ಸಂಯೋಜಿತವಾಗಿತ್ತು . ಅದರಲ್ಲಿ ಅಡಕವಾದ ವಿಷಯಗಳು ಬಹಳ ಮೌಲಿಕವಾಗಿ, ಆಳವಾಗಿದ್ದವು. ಹುಟ್ಟು–ಸಾವು, ಕಾಮ, ಜೀವನ ಈ ಎಲ್ಲಾ ವಿಷಯಗಳ ಬಗ್ಗೆ ಅದರಲ್ಲಿ ಆಳವಾಗಿ ವಿಮರ್ಶಾತ್ಮಕವಾಗಿ ಬರೆದಿದ್ದಾರೆ. ಹಾಗಾಗಿ ನಾನು ಆ ಪುಸಕ್ತವನ್ನೇ ಆರಿಸಿಕೊಂಡೆ.

ಇನ್ನು ಭೈರಪ್ಪನವರ ಬಗ್ಗೆ ಹೇಳಬೇಕು ಎಂದುಕೊಂಡರೆ ಅವರದ್ದು ತುಂಬಾ ಸೂಕ್ಷ್ಮಮನೋಭಾವ. ಅವರು ಪರಿಪೂರ್ಣತೆಯಳ್ಳವರು. ಒಂದು ವಾಕ್ಯ ರಚನೆ ಮಾಡುವಾಗಲೂ ಈ ಪದ ಸರಿ ಇಲ್ಲ, ಆ ಪದ ಸರಿಯಿಲ್ಲ, ಅದನ್ನು ಹೇಗೆ ಸರಿ ಮಾಡಬಹುದು ಎಂದುಕೊಂಡು ಆ ವಾಕ್ಯ ರಚನೆ ಸ್ಪಷ್ಟತೆ ಕಾಣುವವರೆಗೂ ಬಿಡುತ್ತಿರಲಿಲ್ಲ. ಅವರ ಮನಸಿಗೆ ವಾಕ್ಯ ತೃಪ್ತಿ ಕೊಡುವವರೆಗೂ ಸರಿಪಡಿಸುತ್ತಲೇ ಇರುತ್ತಾರೆ. ಹಾಗಾಗಿ ಅವರ ಜೊತೆ ಕೆಲಸ ಮಾಡಿದಾಗ ‘ಹೌ ಶುಡ್‌ ಯು ಟ್ರಾನ್ಸ್‌ಲೇಟ್ ಎ ವರ್ಕ್ ಆಫ್ ಆರ್ಟ್‌’ ಎಂಬುದನ್ನು ಕಲಿತುಕೊಂಡೆ.

ಎಲ್ಲರಂತೆ ನನ್ನ ಜೀವನದಲ್ಲೂ ಅನೇಕ ಸವಾಲುಗಳು ಎದುರಾಗಿದ್ದವು. ಆದರೆ ನಾನು ಎಂದಿಗೂ ಸವಾಲುಗಳನ್ನು ಸವಾಲು ಎಂದುಕೊಳ್ಳದೆ ಮುಂದೆ ಸಾಗಿದೆ. ಜೀವನದಲ್ಲಿ ನಡೆಯುವ ಪ್ರತಿ ಘಟನೆಯೂ ಒಮ್ಮೊಮ್ಮೆ ತುಂಬಾ ಮುಖ್ಯ ಎನಿಸುತ್ತದೆ. ನನ್ನ ತಂದೆ–ತಾಯಿಯ ಬಗ್ಗೆ ನನಗೆ ಹೆಮ್ಮೆ ಇದೆ. ನನಗೆ ಚಿಕ್ಕ ವಯಸ್ಸಿನಲ್ಲಿ ಮದುವೆ ಮಾಡಿದರು ಎಂಬ ಕಾರಣಕ್ಕೆ ನನಗೆ ಅವರ ಮೇಲೆ ಬೇಸರವಾಗಲಿ, ದುಃಖವಾಗಲಿ ಇಲ್ಲ. ಜೀವನದಲ್ಲಿ ಎಲ್ಲವೂ ಅಂದುಕೊಂಡಂತೆ ನಡೆಯಲು ಸಾಧ್ಯವೇ ಇಲ್ಲ.

ಬೆಂಗಳೂರು ನನ್ನ ಪಾಲಿಗೆ ವಿಶೇಷ ಅಂತ ಏನು ಇಲ್ಲ. ನಾನು ಇಲ್ಲಿ ಹೊರಗಡೆ ಹೋಗುವುದೇ ಇಲ್ಲ. ಈ ನಗರದಲ್ಲಿ ಅನೇಕರು ನನ್ನಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪುರಸ್ಕರಿಸಿದ್ದಾರೆ. ಆ ಕಾರಣಕ್ಕೆ ಈ ನಗರಕ್ಕೆ ನಾನು ಕೃತಜ್ಞಳಾಗಿದ್ದೇನೆ. ಆದರೆ ಇಲ್ಲಿನ ಗಡಿಬಿಡಿ ಜೀವನ, ವಾಹನಗಳ ಓಡಾಟವನ್ನು ನೋಡಿದರೆ ನನಗೆ ಹೊರಗೆ ಹೋಗಿ ಸುತ್ತಾಡಿಕೊಂಡು ಬರಬೇಕು ಅಂತ ಅನಿಸುವುದೇ ಇಲ್ಲ. ಈಗಲೂ ನಾನು ಯಾರನ್ನಾದರೂ ಜೊತೆಗೆ ಕರೆದುಕೊಂಡು ಹೋದರೆ ಹೋಗುತ್ತೇನೆ ಹೊರತು, ಒಬ್ಬಳೇ ಎಲ್ಲಿಗೂ ಹೋಗುವುದಿಲ್ಲ. ನನಗೆ ಮನೆಯ ಒಳಗೆ ಮನೆಯವರ ಜೊತೆ ಸಮಯ ಕಳೆಯುವುದು ಎಂದರೆ ತುಂಬಾ ಇಷ್ಟ.

ನಾವೆಲ್ಲಾ ಚಿಕ್ಕ ವಯಸ್ಸಿನಲ್ಲಿ ಬದುಕಿದ ಕಾಲಕ್ಕೂ ಈಗಿನ ಕಾಲಕ್ಕೂ ಮೌಲ್ಯಗಳಲ್ಲಿ ತುಂಬಾ ಬದಲಾವಣೆಯಾಗಿದೆ. ಒಬ್ಬರನೊಬ್ಬರು ಮಾತನಾಡುವುದು ಕಷ್ಟವಾಗಿದೆ. ಮೊದಲೆಲ್ಲಾ ಹಿರಿಯರು, ಕಿರಿಯರು ಸೇರಿ ಮಾತನಾಡುತ್ತಿದ್ದೆವು, ಆದರೆ ಈಗ ಹಾಗಲ್ಲ. ಮಕ್ಕಳು ಮೊಬೈಲ್ ಹಿಡಿದರೆ ದೊಡ್ಡವರು ರಿಮೋಟ್ ಹಿಡಿದು ಕುಳಿತಿರುತ್ತಾರೆ. ಜನರ ನಡುವೆ ಸಂವಹನವೇ ಇಲ್ಲ ಎಂಬಂತಾಗಿದೆ. ಈ ಪರಿಸ್ಥಿತಿ ನೆನೆದಾಗ ನನಗೆ ಭಯವಾಗುತ್ತದೆ.

</p><p><strong>ಆ ಫೋನ್ ಕರೆ!</strong><br/>&#13; ನನ್ನ ಮನಸಿಗೆ ತುಂಬಾ ಆಶ್ಚರ್ಯ ಹಾಗೂ ಆನಂದ ನೀಡಿದ ಘಟನೆ ಎಂದರೆ ಭೈರಪ್ಪನವರು ನನಗೆ ಕರೆ ಮಾಡಿದ್ದು. ನಾನು ಒಮ್ಮೆ ಮನೆಯಲ್ಲಿ ಬರೆಯುತ್ತಾ ಕುಳಿತಿದ್ದಾಗ ಪಕ್ಕದ ಮನೆಯವರೊಬ್ಬರು ನಮ್ಮನೆಗೆ ಬಂದರು. ನನ್ನಲ್ಲಿ ಏನು ಬರೆಯುತ್ತಿದ್ದೀಯಾ, ಕೊಡು ಇಲ್ಲಿ ಎಂದರು. ನಾನು ಅಯ್ಯೋ ಬಿಡಿ, ಏನೋ ಬರೆಯುತ್ತಿದ್ದೀನಿ, ಅದನ್ನೇನು ನೋಡುವುದು ಎಂದರೂ ಬಿಡದೆ ನಾನು ಬರೆಯುತ್ತಿದ್ದ ಪುಸ್ತಕವನ್ನು ಪಡೆದು ನೋಡಿದರು. ‘ಹೋ ಭೈರಪ್ಪನವರ ಬಗ್ಗೆ ಬರೆದಿದ್ದೀಯಾ? ಬರೆದು ಸುಮ್ಮನೆ ಯಾಕೆ ಇಟ್ಟುಕೊಳ್ಳುತ್ತೀಯಾ, ಕೊಡು ಅದನ್ನು ನಾನು ಅವರಿಗೆ ಕೊಡುತ್ತೇನೆ’ ಎಂದು ಬೇಡವೆಂದರೂ ಕೇಳದೆ ಒತ್ತಾಯಿಸಿ ನನ್ನಿಂದ ತೆಗೆದುಕೊಂಡು ಹೋಗಿದ್ದರು. ನಾನು ನನ್ನ ಬರವಣಿಗೆಗೆ ಒಂದು ಕವರಿಂಗ್ ಲೆಟರ್ ಕೂಡ ಹಾಕಿರಲಿಲ್ಲ. ಬರೀ ನನ್ನ ಫೋನ್ ನಂಬರ್ ಮಾತ್ರ ಹಾಕಿದ್ದೆ. ‌</p><p>ಈ ಘಟನೆ ಆಗಿ ತುಂಬಾ ದಿನಗಳು ಕಳೆದಿತ್ತು. ಒಂದು ದಿನ ಫೋನ್ ಕರೆ ಬಂತು. ನಮ್ಮ ಸೊಸೆ ವೈಜಯಂತಿ ಫೋನ್ ರಿಸೀವ್ ಮಾಡಿ ‘ಅಮ್ಮ ನಿಮಗೆ ಪೋನ್, ಯಾರೋ ಭೈರಪ್ಪ ಅಂತೆ’ ಎಂದಳು. ನಾನು ‘ಆ ಹೆಸರಿನವರು ನನಗೆ ಯಾರೂ ಪರಿಚಯ ಇಲ್ಲ, ಫೋನ್ ಇಡಮ್ಮಾ’ ಎಂದಿದ್ದೆ. ಆದರೆ ಸೊಸೆ ಒತ್ತಾಯ ಮಾಡಿ ‘ಯಾರೋ ಒಮ್ಮೆ ಮಾತನಾಡಿ ಅಮ್ಮ’ ಎಂದಾಗ ವಿಧಿಯಿಲ್ಲದೇ ರಿಸೀವರ್‌ ತೆಗೆದುಕೊಂಡು ‘ಹಲೋ’ ಎಂದರೆ ಆ ಕಡೆಯಿಂದ ‘ನಾನು ಎಸ್‌. ಎಲ್‌. ಭೈರಪ್ಪ’ ಎಂಬ ಧ್ವನಿ ಕೇಳಿಸಿತ್ತು. ಆಗ ನನಗೆ ನನ್ನ ಕಿವಿಗಳನ್ನೇ ನಂಬಲಾಗದಷ್ಟು ಆಶ್ಚರ್ಯವಾಗಿತ್ತು. ಅವರು ನಿಮ್ಮ ಪ್ರಬಂಧ ಚೆನ್ನಾಗಿದೆ. ಈ ರೀತಿ ಯಾರೂ ಬರೆದಿರಲಿಲ್ಲ, ಚೆನ್ನಾಗಿದೆ. ಬರೆದು ಇಡಿ ಎಂದಿದ್ದರು’ ಹೀಗೆ ಒಂದು ಫೋನ್ ಕರೆ ನನ್ನ ಭೈರಪ್ಪನವರ ನಡುವೆ ಪರಿಚಯವನ್ನು ಹುಟ್ಟುಹಾಕಿತ್ತು.</p><p><img alt="" src="https://cms.prajavani.net/sites/pv/files/article_images/2018/04/15/file6z5lbserlhd1hrfoyg3y.jpg" style="width: 500px; height: 759px;" data-original="/http://www.prajavani.net//sites/default/files/images/file6z5lbserlhd1hrfoyg3y.jpg"/></p><p><strong>ಸವಿರುಚಿ ಜೀವನ</strong><br/>&#13; ಜೀವನ ನಿಜಕ್ಕೂ ಸುಂದರ. ನನಗೆ ಅನ್ನಿಸಿದ ಹಾಗೆ ಜೀವನ ಅಥವಾ ಬದುಕಿಗೆ ಅದರದ್ದೇ ಆದ ಆರ್ಕಷಣೆ ಹಾಗೂ ಸವಿರುಚಿ ಇದೆ. ಆದರೆ, ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಅರ್ಥ ಮಾಡಿಕೊಂಡು ಮುಂದೆ ಸಾಗಿದರೆ ನಮ್ಮ ಕಷ್ಟಗಳೆಲ್ಲಾ ಕಷ್ಟ ಎನ್ನಿಸದೆ ಅನುಭವ ಎನಿಸಿಕೊಳ್ಳುತ್ತವೆ. ಜೀವನದ ಎಲ್ಲಾ ಹಂತಗಳನ್ನು ಒಂದೊಂದು ಅನುಭವ ಎಂದು ತಿಳಿದುಕೊಂಡರೆ ನಾವು ಬೆಳೆಯುವ ಜೊತೆಗೆ ನಮ್ಮ ಮನಸು ಬೆಳೆಯುತ್ತದೆ.</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT