ಜೂನಿಯರ್ ಕಾಲೇಜುಗಳಲ್ಲಿ ಶಿಕ್ಷಣ ಶುಲ್ಕ, ಶಿಕ್ಷಕ ವ್ಯವಸ್ಥೆ: ಸ್ವರೂಪ ನಿರ್ಧಾರಕ್ಕೆ ಸಮಿತಿ
ಬೆಂಗಳೂರು, ಏ. 22– ಈ ಶೈಕ್ಷಣಿಕ ವರ್ಷದಿಂದ ರಾಜ್ಯದಲ್ಲಿ ಆರಂಭವಾಗಲಿರುವ ಎರಡು ವರ್ಷಗಳ ಪಿಯುಸಿ ವ್ಯವಸ್ಥೆಯ ಶಿಕ್ಷಕವರ್ಗ, ವೇತನಶ್ರೇಣಿ, ಶಿಕ್ಷಣಶುಲ್ಕ ಮುಂತಾದ ವಿಷಯಗಳ ಸ್ವರೂಪ ನಿರ್ಧರಿಸಲು ಉಪಕುಲಪತಿ ಶ್ರೀ ಟಿ.ಕೆ.ತುಕೋಳ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ.
1971–72ರಿಂದ ಹೈಸ್ಕೂಲುಗಳನ್ನು ಹೈಯರ್ ಸೆಕೆಂಡರಿ ಶಾಲೆಗಳಾಗಿ ಪರಿವರ್ತಿಸಲು ಅನುಮತಿ ಕೊಡಲಾಗುವುದಿಲ್ಲ. ಆದರೆ ಈಗಿರುವ ಹೈಯರ್ ಸೆಕೆಂಡರಿ ಶಾಲೆಗಳಿಗೆ ತಾತ್ಕಾಲಿಕ ವ್ಯವಸ್ಥೆಯ ರೂಪದಲ್ಲಿ 1971–72ರ ಅವಧಿಯಲ್ಲಿ ಪ್ರಿ–ಯೂನಿವರ್ಸಿಟಿ ಕೋರ್ಸಿನ ಮೊದಲ ವರ್ಷದ ಶಿಕ್ಷಣ ಆರಂಭಿಸಲು ಅನುಮತಿ ನೀಡಲಾಗುವುದು.
ಐ.ಎ.ಎಸ್. ಅಧಿಕಾರಿಗಳ ಅಜ್ಞಾನ
ಅಲಹಾಬಾದ್, ಏ. 22– ಐಎಎಸ್ಗೆ (ಇಂಡಿಯನ್ ಅಡ್ಮಿನಿಸ್ಟ್ರೇಷನ್ ಸರ್ವಿಸ್) ಆಯ್ಕೆಯಾಗಿರುವ ಬಹುತೇಕ ಎಲ್ಲ ಅಧಿಕಾರಿಗಳೂ ಸಾಮಾನ್ಯ ಪರಿಜ್ಞಾನ ಪರೀಕ್ಷೆಯಲ್ಲಿ ತೀರ ಕಡಿಮೆ ಅಂಕಿ ಗಳನ್ನು ಪಡೆದವರು. ಅಷ್ಟು ಅಜ್ಞಾನಿಗಳು ಅವರು.
ಅಲಹಾಬಾದ್ ವಿಶ್ವವಿದ್ಯಾಲಯ ನೌಕರಿ ಮಾಹಿತಿ ಮತ್ತು ಮಾರ್ಗದರ್ಶನದ ಬ್ಯೂರೊ ನಡೆಸಿರುವ ಸಮೀಕ್ಷೆಯಿಂದ ಇದು ವೇದ್ಯ.