ಬೆಂಗಳೂರು: ‘ಕರ್ನಾಟಕದ ಚಿತ್ರಕಲೆಗೆ ತವರೂರು ಚಿತ್ರಕಲಾ ಪರಿಷತ್ತು. ಇದು ಎಲ್ಲೆಡೆ ವ್ಯಾಪಿಸಬೇಕೆಂಬ ಉದ್ದೇಶದಿಂದ ಆರು ಸ್ಥಳಗಳಲ್ಲಿ ಪ್ರಾದೇಶಿಕ ಚಿತ್ರಕಲಾ ಗ್ಯಾಲರಿ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕರ್ನಾಟಕ ಚಿತ್ರಕಲಾ ಪರಿಷತ್ತು ವತಿಯಿಂದ ಭಾನುವಾರ ಆಯೋಜಿಸಿದ್ದ ಚಿತ್ರಸಂತೆಯ 19ನೇ ಆವೃತ್ತಿಗೆ ಭಾರತಾಂಬೆ ಕಲಾಕೃತಿಯ ಪಕ್ಕ ಹಸ್ತಾಕ್ಷರ ಹಾಕುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
‘ಸ್ವಾಯತ್ತ ಸಂಸ್ಥೆಯಾಗಿರುವ ಚಿತ್ರಕಲಾ ಪರಿಷತ್ತಿಗೆ ಡೀಮ್ಡ್ ವಿಶ್ವವಿದ್ಯಾಲಯದ ಸ್ಥಾನಮಾನ ನೀಡಬೇಕೆಂಬ ಬೇಡಿಕೆಯಿದೆ. ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಡೀಮ್ಡ್ ವಿಶ್ವ ವಿದ್ಯಾಲಯವೆಂದು ಘೋಷಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದರು.
‘ಚಿತ್ರಕಲಾ ಪರಿಷತ್ತಿನ ವ್ಯಾಪ್ತಿಯಲ್ಲಿ ಹಲವಾರು ಸಂಸ್ಥೆಗಳನ್ನು ತಂದು ಚಿತ್ರಕಲೆಗೆ ಹೊಸ ಆಯಾಮವನ್ನು ನೀಡುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು’ ಎಂದು ಭರವಸೆ ನೀಡಿದರು.
‘ಚಿತ್ರಸಂತೆ ಒಂದು ಅಭೂತಪೂರ್ವ ಕಲ್ಪನೆ. ಕಲಾವಿದರು ಮತ್ತು ಕಲಾ ಪೋಷಕರ ಸಂಗಮವೇ ಚಿತ್ರ ಸಂತೆ. ಹಲವಾರು ಉದಯೋನ್ಮುಖ ಕಲಾವಿದರಿದ್ದಾರೆ. ಕಲೆ ಎನ್ನುವುದು ಪ್ರತಿ ಮನುಷ್ಯನ ಒಳಗಿರುವ ಪ್ರತಿಭೆ. ವಿಶ್ವಕರ್ಮ ಜನಾಂಗದವರು ಪಂಚಕಲೆಯಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ’ ಎಂದರು.
ಐಸ್ಕ್ರಿಮ್ ಖರೀದಿಸಿದ ಸಿ.ಎಂ
ಚಿತ್ರಸಂತೆಗೆ ಚಾಲನೆ ನೀಡಿದ ಬಳಿಕ ಒಂದು ಸುತ್ತು ಹಾಕಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಐಸ್ ಕ್ರೀಮ್ ಮಾರುತ್ತಿರುವುದನ್ನು ಗಮನಿಸಿದರು. ಬಿಸಿಲಿನ ತಾಪವೂ ಹೆಚ್ಚಾಗಿತ್ತು. ಬಾಲ್ಯದಿಂದಲೂ ಇಷ್ಟವಾದ ಜಾಯ್ ಮ್ಯಾಂಗೋ ಕ್ರೀಮ್ ಐಸ್ ಕ್ಯಾಂಡಿಯನ್ನು ತಾವೇ ಹಣ ಪಾವತಿಸಿ ಖರೀದಿಸಿ, ಸವಿದರು.