ಬೆಂಗಳೂರು: ’ಈ ವರ್ಷ ರಾಜ್ಯದಾದ್ಯಂತ 6500 ಶಾಲಾ ಕಟ್ಟಡಗಳ ನಿರ್ಮಾಣ ಕಾರ್ಯ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಈ ಯೋಜನೆ ಕರ್ನಾಟಕದ ಶಿಕ್ಷಣ ಕ್ಷೇತ್ರಕ್ಕೆ ಶಕ್ತಿಯನ್ನು ತುಂಬುವ ಕ್ರಾಂತಿಕಾರಿ ಹೆಜ್ಜೆಯಾಗಲಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಪ್ರಕಾಶ ನಗರದಲ್ಲಿ ಭಾನುವಾರ ನಡೆದ ಮುದಲಿಯಾರ್ ಸೇವಾ ಸಂಘದ ವಜ್ರ ಮಹೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಮುದಲಿಯಾರ್ ಸಮುದಾಯ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಉತ್ತಮ ಯೋಜನೆಗಳನ್ನು ರೂಪಿಸಬೇಕು. ಬೆಂಗಳೂರಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆಯುವ ಮೂಲಕ ಈ ಕ್ಷೇತ್ರಕ್ಕೆ ಕೊಡುಗೆ ನೀಡಬೇಕು’ ಎಂದು ಸಲಹೆ ನೀಡಿದರು.
ಮುದಲಿಯಾರ್ ಸೇವಾ ಸಂಘದ ಮಾಜಿ ಅಧ್ಯಕ್ಷರಾಗಿದ್ದ ಸಿ. ಅರುಣಾಚಲಂ ಅವರ ಪುತ್ಥಳಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅನಾವರಣಗೊಳಿಸಿ ಪುಷ್ಪನಮನ ಸಲ್ಲಿಸಿದರು. ಶಾಸಕ ಸುರೇಶ್ ಕುಮಾರ್, ಸಂಸದ ಪಿ.ಸಿ. ಮೋಹನ್ ಇದ್ದರು.
’ನಗರಪ್ರದೇಶದಲ್ಲಿ ಜನಸಂಖ್ಯೆ ಹೆಚ್ಚುತ್ತಿದೆ. ಆದರೆ, ಕಡಿಮೆ ಶಾಲೆಗಳಿವೆ. ಜತೆಗೆ, ಖಾಸಗಿ ಶಾಲೆಗಳಲ್ಲಿ ದುಬಾರಿ ಶುಲ್ಕ ವಿಧಿಸಲಾಗುತ್ತಿದೆ. ಹೀಗಾಗಿ, ಬೆಂಗಳೂರಿನಲ್ಲಿ ಎಲ್ಲ ಸಂಘ-ಸಂಸ್ಥೆಗಳು ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ನೀಡಬೇಕು. ಈ ಮೂಲಕ ಬಡವರು, ಮಧ್ಯಮ ವರ್ಗದ ಜನರ ಮಕ್ಕಳಿಗೆ ಅತಿ ಕಡಿಮೆ ವೆಚ್ಚದಲ್ಲಿ ಶಿಕ್ಷಣ ನೀಡಬೇಕು. ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಮುಂದಾಗುವ ಸಂಘಗಳಿಗೆ ಸರ್ಕಾರವು ಸಹಕಾರ ನೀಡಲಿದೆ’ ಎಂದರು.
ಮುದಲಿಯಾರ್ ಸಮುದಾಯದ ಕೊಡುಗೆ: ‘ಮೈಸೂರು ಸಂಸ್ಥಾನದ ಇತಿಹಾಸದಲ್ಲಿ ಅರ್ಕಾಟ್ ನಾರಾಯಣಸ್ವಾಮಿ ಅವರು ತಮ್ಮ ಛಾಪು ಮೂಡಿಸಿದ್ದಾರೆ. ಹೈಕೋರ್ಟ್ ಅಠಾರ ಕಚೇರಿ ಕಟ್ಟಡ ಸೇರಿದಂತೆ ಮೈಸೂರು, ಬೆಂಗಳೂರಿನ ಪ್ರಮುಖ ಕಟ್ಟಡಗಳ ನಿರ್ಮಾಣದಲ್ಲಿ ಅವರ ಪಾತ್ರ ಮಹತ್ವದ್ದು. ಬಿ.ಆರ್. ಮಾಣಿಕಂ ಮುದಲಿಯಾರ್ ವಿಧಾನಸೌಧ, ವಾಣಿವಿಲಾಸ ಆಸ್ಪತ್ರೆ, ರಸೆಲ್ ಮಾರುಕಟ್ಟೆ ನಿರ್ಮಾಣದಲ್ಲಿ ದೊಡ್ಡ ಪಾತ್ರ ವಹಿಸಿದ್ದರು. ಬೆಂಗಳೂರಿನ ನಿರ್ಮಾಣದಲ್ಲಿ ಮುದಲಿಯಾರ್ ಸಮುದಾಯ ಐತಿಹಾಸಿಕ ಕಾರ್ಯಗಳನ್ನು ಮಾಡಿದೆ’ ಎಂದರು.