ಕಲಬುರಗಿ: ‘ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದ್ದರೂ ದೇಶದ ಶೇ 80ರಷ್ಟು ಶೋಷಿತ ಸಮುದಾಯಗಳಿಗೆ ಅವಶ್ಯಕ ಸವಲತ್ತುಗಳು ತಲುಪಿಲ್ಲ’ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಬೇಸರ ವ್ಯಕ್ತಪಡಿಸಿದರು.
ನಗರದಲ್ಲಿ ಭಾನುವಾರ ಆದಿ ಜಾಂಬವ ಕಲ್ಯಾಣ ಸಂಘದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಮುದಾಯ ಭವನ ಹಾಗೂ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಉದ್ಘಾಟಿಸಿ ಮಾತನಾಡಿದ ಅವರು, ‘ಮಾದಿಗ ಸಮಾಜದ ಶೇ 85ರಷ್ಟು ಜನರಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಡಲು ಆಗುತ್ತಿಲ್ಲ. ಸಾಕಷ್ಟು ಬಜೆಟ್ಗಳು ಮಂಡನೆ ಆಗಿದ್ದರೂ ಅವರ ಅವಶ್ಯಕತೆಗಳನ್ನು ಪೂರೈಸಲು ಆಗಲಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.
‘ಇವತ್ತಿನ ರಾಜಕಾರಣದ ಒತ್ತಡದಲ್ಲಿ ನಾನು, ಗೋವಿಂದ ಕಾರಜೋಳ, ಎಚ್.ಆಂಜನೇಯ ಸೇರಿ ಎಡಗೈ ಸಮುದಾಯದವರು ರಾಜಕೀಯದಲ್ಲಿ ಇರಬೇಕೋ ಬೇಡವೋ ಎನ್ನುವಂತೆ ಆಗಿದೆ’ ಎಂದು ಹೇಳಿದರು.
‘ನಮ್ಮ ಶಕ್ತಿ, ಮಾನಸಿಕತೆಯ ವಿರುದ್ಧವಾಗಿ ಹೋಗುವ ರಾಜಕಾರಣ, ರಾಜಕೀಯ ಪಕ್ಷ, ಗುಂಪನ್ನು ಎದುರಿಸಲು ಒಗ್ಗಟ್ಟಿನ ತೀರ್ಮಾನ ಮಾಡಬೇಕು. ಸಮಾಜದ ವಿರುದ್ಧ ತೀರ್ಮಾನ ತೆಗೆದುಕೊಳ್ಳುವ ಯಾವುದೇ ರಾಜಕೀಯ ಪಕ್ಷದ ಮಂತ್ರಿಯಾದರೂ ಸರಿ, ಅವರನ್ನು ಸಮಾಜದಿಂದ ದೂರ ಇಡುತ್ತೇವೆ ಎನ್ನುವಂತಹ ಮನೋಭಾವ ಬೆಳೆಯಬೇಕು’ ಎಂದರು.