ಮೈಸೂರು/ಮಂಡ್ಯ/ಚಾಮರಾಜನಗರ/ಹಾಸನ: ನಿವೃತ್ತ ಉಪ ನೋಂದಣಾಧಿಕಾರಿ ಕೆ.ಎಸ್.ಶಿವಾನಂದ್ ತಮ್ಮ ಮಗನ ಮದುವೆ ಸಿದ್ಧತೆ ಯಲ್ಲಿರು ವಾಗಲೇ ಎಸಿಬಿ ದಾಳಿ ಕಾರ್ಯಾಚರಣೆ ನಡೆದಿದೆ. ನ.29ಕ್ಕೆ ಮದುವೆ ನಿಗದಿಯಾಗಿದೆ.
ಬಳ್ಳಾರಿಯಲ್ಲಿ ಉಪ ನೋಂದಣಾಧಿಕಾರಿಯಾಗಿ ಜುಲೈ 30ರಂದು ನಿವೃತ್ತರಾಗಿದ್ದ ಅವರ ಮದ್ದೂರು ತಾಲ್ಲೂಕು ಕೊತ್ತನಹಳ್ಳಿಯಲ್ಲಿರುವ ಮನೆಯ ಮೇಲೆ 13 ಅಧಿಕಾರಿಗಳು ಸಂಜೆಯವರೆಗೂ ಶೋಧ ನಡೆಸಿದರು. ಬೆಂಗಳೂರಿನ ಅವರ ಇನ್ನೊಂದು ಮನೆ, ಸಂಬಂಧಿಕರ ಮನೆಗಳ ಮೇಲೂ ದಾಳಿ ನಡೆಸಿ ದಾಖಲಾತಿ ವಶಕ್ಕೆ ಪಡೆದರು.
ಕೆ.ಆರ್.ಪೇಟೆ ಹೇಮಾವತಿ ನಾಲಾ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಶ್ರೀನಿವಾಸ್ ಕಚೇರಿ ಮೇಲೆ, ಮೈಸೂರಿನ ಬೋಗಾದಿಯಲ್ಲಿರುವ ಅವರ ಮನೆ, ನಂಜನಗೂಡಿನ ಫಾರಂ ಹೌಸ್ ಮೇಲೂ ದಾಳಿ ನಡೆಸಿದರು.
ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯ ಕಾರ್ಯಪಾಲಕ ಎಂಜಿನಿಯರ್ ಕೆ.ಎಸ್.ಲಿಂಗೇಗೌಡ ಅವರ ಸಹೋದರ, ಹನೂರು ತಾಲ್ಲೂಕಿನ ಕಣ್ಣೂರಿನ ಸಿದ್ದೇಗೌಡ ಅವರ ಮನೆಯಲ್ಲಿ ತಪಾಸಣೆ ನಡೆಸಿ, ಜಮೀನು ಸೇರಿದಂತೆ ಮಹತ್ವದ ಹಲವು ದಾಖಲೆ ವಶಪಡಿಸಿಕೊಂಡರು. ಸಿದ್ದೇಗೌಡ ಹನೂರಿನಲ್ಲಿ ಗೌರಿಶಂಕರ ಕಲ್ಯಾಣ ಮಂಟಪದ ಮಾಲೀಕರಾಗಿದ್ದಾರೆ.
ಅರಸೀಕೆರೆ ನಗರದ ಎಪಿಎಂಸಿ ಉದ್ಯಮಿಗಳಾದ ಆರ್.ಸಿ.ಸಿ. ರಜನಿಕಾಂತ್, ಜೆ.ಡಿ.ಮಹೇಶ್ವರಪ್ಪ ಹಾಗೂ ರಂಗಸ್ವಾಮಿ ಅವರ ಮನೆ ಹಾಗೂ ಕಚೇರಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದರು.