ವಿಜಯಪುರ: ಕೃಷಿ ಭೂಮಿಯನ್ನು ಕೃಷಿಯೇತರ(ಎನ್ಎ) ಉದ್ದೇಶಕ್ಕೆ ಬಳಸಲು ಅನುಕೂಲವಾಗಿಸುವ ಉದ್ದೇಶದಿಂದ ಒಂದೇ ದಿನದಲ್ಲಿ ಎನ್ಎ ಮಾಡಿಕೊಡಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ನಗರದಲ್ಲಿ ಶನಿವಾರ ಜಿಲ್ಲಾಡಳಿತ ಭವನ ನಿರ್ಮಾಣ ಕಾಮಗಾರಿಗೆ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಸದ್ಯ ಕೃಷಿ ಭೂಮಿಯನ್ನು ಎನ್ಎ ಮಾಡಿಸಲು ಆರರಿಂದ ಏಳು ತಿಂಗಳು ಅನಗತ್ಯವಾಗಿ ವಿಳಂಬವಾಗುತ್ತಿದೆ. ಈ ವಿಳಂಬವನ್ನು ಶೀಘ್ರದಲ್ಲೇ ನಿವಾರಿಸಲಾಗುವುದು ಎಂದು ಹೇಳಿದರು.
ಕಂದಾಯ ಇಲಾಖೆಯಿಂದಶೀಘ್ರದಲ್ಲೇ ರಾಜ್ಯದಾದ್ಯಂತ ಆರ್ಟಿಸಿ ಅಭಿಯಾನ ಹಮ್ಮಿಕೊಳ್ಳಲಾಗುವುದು. ಈಅಭಿಯಾನದಡಿ ರಾಜ್ಯದ 40 ಲಕ್ಷ ರೈತ ಕುಟುಂಬಗಳಿಗೆ ಅವರ ಜಮೀನಿನ ನಕಾಶೆ, ಖಾತೆ, ಪೋಡಿ, ಫೌತಿ ಖಾತೆಯನ್ನು ಆರ್ಟಿಸಿ ಜೊತೆಗೆ ಉಚಿತವಾಗಿ ನೀಡಲಾಗುವುದು ಎಂದರು.
ಕಂದಾಯ ಇಲಾಖೆಯನ್ನು ಸರಳೀಕರಣ ಮಾಡುವ ಉದ್ದೇಶದಿಂದ ಈಗಾಗಲೇ 79 ಎ ಮತ್ತು ಬಿ ಯನ್ನು ತೆಗೆದುಹಾಕಲಾಗಿದೆ ಎಂದು ಹೇಳಿದರು.