ಬೆಂಗಳೂರು: ರೈತರಿಗೆ ಆತ್ಮಸ್ಥೈರ್ಯ ತುಂಬಲು ಆರಂಭಿಸಿದ್ದ ‘ರೈತರೊಂದಿಗೆ ಒಂದು ದಿನ’ ಕಾರ್ಯಕ್ರಮವನ್ನು ಮುಂದುವರಿಸಲು ಕೃಷಿ ಸಚಿವ ಬಿ.ಸಿ.ಪಾಟೀಲ ನಿರ್ಧರಿಸಿದ್ದಾರೆ.
‘ಕೋವಿಡ್ ಕಾರಣ ರೈತರ ಜೊತೆ ಕಾಲ ಕಳೆಯಲು ಸಾಧ್ಯವಾಗಿಲ್ಲ. ಇದೀಗ ಕೋವಿಡ್ ಜೊತೆಗೆ ಬದುಕಬೇಕಾದ ಪರಿಸ್ಥಿತಿ ಇದೆ. ಹೀಗಾಗಿ, ಮತ್ತೆ ರೈತರೊಂದಿಗೆ ಒಂದು ದಿನ ಕಳೆಯಲು ನಿರ್ಧರಿಸಿದ್ದೇನೆ’ ಎಂದು ಅವರು ತಿಳಿಸಿದರು.
‘ರೈತರಲ್ಲಿ ಆತ್ಮವಿಶ್ವಾಸ ತುಂಬುವುದು ಮತ್ತು ಮಿಶ್ರ ಬೆಳೆ ಮೂಲಕ ಆದಾಯದ ದ್ವಿಗುಣಗೊಳಿಸುವಂತೆ ಪ್ರೋತ್ಸಾಹ ನೀಡುವುದು ಕಾರ್ಯಕ್ರಮದ ಉದ್ದೇಶ. ಸಾಧ್ಯವಾದ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಲಾಗುವುದು’ ಎಂದರು.
‘ಕೆಲವು ಕಡೆ ಮಳೆ ಕೈ ಕೊಟ್ಟರೂ ಒಣ ಬೆಳೆಗಳಿಗೆ ಸಮಸ್ಯೆ ಆಗಿಲ್ಲ. ಬೀಜ, ಗೊಬ್ಬರದ ಸಮಸ್ಯೆ ಈ ವರ್ಷ ಇಲ್ಲ’ ಎಂದೂ ಪಾಟೀಲ ಅವರು ತಿಳಿಸಿದರು.