ಕೊಪ್ಪಳ: ಗಂಗಾವತಿ ತಾಲ್ಲೂಕಿನ ಅಂಜನಾದ್ರಿಯಲ್ಲಿನ ಆಂಜನೇಯ ಸ್ವಾಮಿ ಜಯಂತಿ ಅಂಗವಾಗಿ ಏ.16ರಂದು 1,11,101 ಕುಂಕುಮಾರ್ಚನೆ, ಸಂತ ಸಮಾವೇಶ, ದೇಶದ ಪವಿತ್ರ ನದಿಗಳ ನೀರಿನಿಂದ ಜಲಾಭಿಷೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ವಿದ್ಯಾದಾಸಬಾಬಾ ತಿಳಿಸಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ13 ರಿಂದ 21 ರವರೆಗೆ 10 ದಿನಗಳ ಕಾಲ ಜಯಂತ್ಯುತ್ಸವ ಪ್ರಯುಕ್ತ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಹನುಮಾನ್ ಜನ್ಮಭೂಮಿ ಮಂದಿರ ಅಂಜನಿ ಪರ್ವತ, ಕಿಷ್ಕಿಂಧಾ ಪೀಠದ ಪೀಠಾಧಿಪತಿಯಾಗಿರುವ ಬಾಬಾ ಅವರು ‘ದೇವಸ್ಥಾನದಲ್ಲಿ ಈಗ ಯಾವುದೇ ವಿವಾದ ಇಲ್ಲ. ಹೈಕೋರ್ಟ್ ಪೂಜೆಯ ಹಕ್ಕನ್ನು ನಮಗೆ ನೀಡಿದೆ. ಅಲ್ಲದೆ ಧಾರ್ಮಿಕ ಕಾರ್ಯ ಸೇರಿದಂತೆ ಹೋಮ, ಹವನ ನಡೆಸಲು ಅವಕಾಶವಿದೆ’ ಎಂದರು.
‘ಚಿತ್ರಕೂಟ, ಕಾಶಿ, ಗಂಗೋತ್ರಿ, ಹರಿದ್ವಾರ, ಹೃಷಿಕೇಶ, ಮಥುರಾ, ಉಜ್ಜಿಯಿನಿ ಸೇರಿದಂತೆ ವಿವಿಧ ಭಾಗಗಳಿಂದ 200ಕ್ಕೂ ಹೆಚ್ಚುಸಾಧು, ಸಂತರು ಪಾಲ್ಗೊಳ್ಳಲಿದ್ದಾರೆ. 108 ತೆಂಗಿನಕಾಯಿ ಅಭಿಷೇಕ, ಸಿಂಧೂರ, ತುಪ್ಪದ ಅಭಿಷೇಕ, ಅಲಂಕಾರ, ಮಾರುತಿ ಮಹಾಯಾಗ, ಪೂರ್ಣಾಹುತಿ, ಮಹಾ ಪ್ರಸಾದ ಜರುಗಲಿದೆ’ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀರಾಮ ಸೇನಾ ವಿಭಾಗೀಯ ಅಧ್ಯಕ್ಷ ಸಂಜೀವ್ ಮರಡಿ ಇದ್ದರು.