ಬೆಂಗಳೂರು: ರೌಡಿ ವಿಷಯವಾಗಿ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಚರ್ಚೆಯನ್ನು ಮುಂದುವರೆಸುವ ಮುನ್ನ ಇಬ್ಬರೂ ಮುಖಂಡರು ಕೆಳಕಂಡ ಪ್ರಶ್ನೆಗಳಿಗೆ ಉತ್ತರಿಸುವಂತೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಸವಾಲು ಹಾಕಿದ್ದಾರೆ.
*ದೇವರಾಜ ಅರಸು ಕಾಲದಲ್ಲಿ ಅಂದಿನ ಭೂಗತ ರೌಡಿಗಳ ಜತೆ ವಿಧಾನಸೌಧದ ಮೂರನೇ ಮಹಡಿಯಲ್ಲಿ ಕುಳಿತು ಪೊಲೀಸರಿಂದ ಎಳನೀರು ತರಿಸಿಕೊಳ್ಳುತ್ತಿದ್ದವರು ಯಾವ ಪಕ್ಷದಲ್ಲಿದ್ದರು?
*ಯಾರೋ ಕೆಲವರು ಕಾಂಗ್ರೆಸ್ ಪಕ್ಷದ ಬ್ಯಾನರ್ ಹರಿದು ಹಾಕಿದಾಗ, ರಾಜ್ಯದಲ್ಲಿ ಬಿಜೆಪಿಯವರಿಗೆ ಒಂದೂ ಕಾರ್ಯಕ್ರಮ ಮಾಡಲು ಬಿಡುವುದಿಲ್ಲ ಎಂದು ಬೀದಿ ರೌಡಿಯ ರೀತಿ ಬೆದರಿಕೆ ಹಾಕಿದ್ದು ಯಾವ ಸಂಸ್ಕೃತಿ ?
*ಟಿಪ್ಪು ಕುರಿತು ನಿಮ್ಮ (ಸಿದ್ದರಾಮಯ್ಯ) ಕುರುಡು ಪ್ರೇಮವನ್ನು ಖಂಡಿಸಿ, ಕೊಡಗಿನ ಜನ ನಿಮ್ಮ ಕಾರಿಗೆ ಕಲ್ಲು ಹೊಡೆದಾಗ ಅದಕ್ಕೆ ಪ್ರತೀಕಾರವಾಗಿ ಇಡೀ ರಾಜ್ಯಕ್ಕೆ ಬೆಂಕಿ ಹಚ್ಚುತ್ತೇವೆ ಎಂದು ಹೇಳಿದ್ದು ರೌಡಿ ಸಂಸ್ಕೃತಿಯ ಲಕ್ಷಣವಲ್ಲವೇ?
*ಪ್ರತಿಭಟನೆ ಮಾಡಲು ಬಂದರೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚುತ್ತೇನೆ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದ್ದು, ತಾವು ಓದಿರುವ ಪ್ರಜಾಪ್ರಭುತ್ವದ ಯಾವ ಹಾಳೆಯಲ್ಲಿದೆ?
*ಮಂಗಳೂರಿನ ಟಾರ್ಗೆಟ್ ಗ್ರೂಪ್ನ ರೌಡಿ ಇಲ್ಯಾಸ್, ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯ ಅಲ್ಲವೇ? ಮೂಡು ಬಿದರೆ ಟಿಕೆಟ್ ಆಕಾಂಕ್ಷಿ ಮಿಥುನ್ ರೈ ಹಿನ್ನೆಲೆ ಏನು?
*ಕಾಂಗ್ರೆಸ್ನ ಮಾಜಿ ಕಾರ್ಪೊರೇಟರ್ ಕೆ.ಎಸ್.ಸಮೀವುಲ್ಲಾ ಅವರ ಹಿನ್ನೆಲೆ ಏನು? ಕೆಪಿಸಿಸಿ ಕಾರ್ಮಿಕ ವಿಭಾಗದ ಸದಸ್ಯ ಅಲ್ತಾಫ್ ಖಾನ್ ರೌಡಿಶೀಟರ್ ಎನ್ನುವುದು ಗೊತ್ತಿಲ್ಲವೆ? ಮಾಜಿ ಶಾಸಕ ಆರ್.ವಿ.ದೇವರಾಜ್ ಜತೆ ರೌಡಿ ಶೀಟರ್ಗಳು ಪೋಸ್ ಕೊಟ್ಟು ಅವರ ಕ್ಷೇತ್ರದಲ್ಲಿ ಪೋಸ್ಟರ್ ಅಂಟಿಸಿಕೊಂಡಿದ್ದು ಯಾವ ಕಾರಣಕ್ಕೆ?