ಬೆಂಗಳೂರು: ರಾಜ್ಯದಲ್ಲಿ ವಕ್ಫ್ ಆಸ್ತಿ ಕಬಳಿಕೆ ಕುರಿತು ಅನ್ವರ್ ಮಾಣಿಪ್ಪಾಡಿ ವರದಿಯನ್ನು ವಿಧಾನ ಪರಿಷತ್ತಿನಲ್ಲಿ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಗುರುವಾರ ರಾತ್ರಿ ಮಂಡಿಸುತ್ತಿದ್ದಂತೆ ಸದನದಲ್ಲಿ ಕೋಲಾಹಲ ಉಂಟಾಯಿತು.
ಆಡಳಿತ– ವಿರೋಧ ಪಕ್ಷಗಳ ಸದಸದ್ಯರ ನಡುವೆ ವಾಗ್ವಾದ, ಗದ್ದಲ ಉಂಟಾಗುತ್ತಿದ್ದಂತೆ ಕಲಾಪವನ್ನು ಸಭಾಪತಿ ರಘುನಾಥ ಮಲ್ಕಾಪುರೆ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಮುಂದೂಡಿದರು.
ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ನಜೀರ್ ಅಹ್ಮದ್ ಮತ್ತಿತರ ಕಾಂಗ್ರೆಸ್ ಸದಸ್ಯರು ಚರ್ಚೆಗೆ ಅವಕಾಶ ನೀಡಬೇಕೆಂದು ಪಟ್ಟು ಹಿಡಿದರು. ವರದಿ ಮೂಲಕ ಹಲವರ ಹೆಸರಿಗೆ ಮಸಿ ಬಳಿಯುವ ಕೆಲಸ ಆಗುತ್ತಿದೆ ಎಂದು ವಿರೋಧ ವ್ಯಕ್ತಪಡಿಸಿದಾಗ ಆಡಳಿತ ಮತ್ತು ವಿರೋಧ ಪಕ್ಷದ ನಾಯಕರ ನಡುವೆ ವಾಗ್ವಾದ ನಡೆಯಿತು.
ಈ ಮಧ್ಯೆ ಬಿಜೆಪಿಯ ಎನ್. ರವಿಕುಮಾರ್, ಕಾಂಗ್ರೆಸ್ ನಾಯಕರಾದ ರೆಹಮಾನ್ ಖಾನ್, ಜಮೀರ್ ಅಹ್ಮದ್ ಸೇರಿದಂತೆ ಕೆಲವರ ಹೆಸರು ಉಲ್ಲೇಖಿಸಿ, ಈ ಬಗ್ಗೆ ತನಿಖೆ ಆಗಲಿ ಎಂದು ಆಗ್ರಹಿಸಿದರು.
ವರದಿ ಮಂಡಣೆಯಾಗಿ ಚರ್ಚೆಯಾಗದೆ, ಹೆಸರಿಗೆ ಮಸಿ ಬಳಿಯು ಕೆಲಸ ಯಾಕೆ ಮಾಡುತ್ತೀರಾ‘ ಎಂದು ಕಾಂಗ್ರೆಸ್ ಸದಸ್ಯರು ಪ್ರಶ್ನಿಸಿದಾಗ ಗದ್ದಲ ಉಂಟಾಯಿತು.