ಕೊಪ್ಪ: ‘ಪರಿಶಿಷ್ಟ ಸರ್ಕಾರಿ ನೌಕರರು ಮತಾಂತರವಾದರೆ ಅವರಿಗೆ ಮೀಸಲಾತಿ ಸಿಗುವುದಿಲ್ಲ. ದಲಿತ ಬಂಧುಗಳ ಹಿತ ಕಾಪಾಡಲು, ಹಿಂದೂ ಧರ್ಮವನ್ನು ಸಂರಕ್ಷಣೆ ಮಾಡುವ ಸಲುವಾಗಿ ಮತಾಂತರ ನಿಷೇಧ ಕಾಯ್ದೆ ಮಾಡಿದ್ದೇವೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ತಾಲ್ಲೂಕಿನ ಮಾವಿನಕಟ್ಟೆಯಲ್ಲಿ ಹಿಂದೂ ಜನಜಾಗೃತಿ ಸಮಿತಿ ಮಂಗಳವಾರ ಆಯೋಜಿಸಿದ್ದ ‘ಹಿಂದೂ ಸಂಗಮ’ದಲ್ಲಿ ಅವರು ಮಾತನಾಡಿದರು.
‘ಕ್ರೈಸ್ತ ಧರ್ಮ ಗುರುಗಳು ಹಾಗೂ ಮುಸ್ಲಿಂ ಧರ್ಮ ಗುರುಗಳು ನನ್ನ ಬಳಿ ಬಂದು ಮತಾಂತರ ಕಾಯ್ದೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು, ಆಗ ನಾನು ಕಾಯ್ದೆಯ ಪ್ರತಿಯನ್ನು ಅವರಿಗೆ ನೀಡಿ ವಿವರವಾಗಿ ತಿಳಿಸಿದ್ದೆ. ಬಹಳ ಜನಕ್ಕೆ ಕೇಸರಿ ಅಲರ್ಜಿ, ಮುಖಂಡರೊಬ್ಬರು ಕೇಸರಿ ಪೇಟ ಹಾಕಿದರೆ ತೆಗೆದು ಹಾಕುತ್ತಾರೆ. ಗಣಪತಿ ಉತ್ಸವದಲ್ಲಿ ಕೇಸರಿ ಧ್ವಜ ಹಾಕಬೇಡಿ ಎನ್ನುವುದು ಸರಿಯೇ? ಎಂದರು.
ಚೈತ್ರಾ ಕುಂದಾಪುರ ಮಾತನಾಡಿ, ‘ಹೆಣ್ಣು ಮಕ್ಕಳಿಗೆ ರಕ್ಷಾ ಬಂಧನದಲ್ಲಿ ರಾಕಿ ಕಟ್ಟಿದಾಗ ದುಡ್ಡು ಕೊಡುವುದು, ಸೀರೆ ಕೊಡುವುದನ್ನು ನಿಲ್ಲಿಸಿ, ಅವರಿಗೆ ಕತ್ತಿ ಹಿಡಿಯುವುದನ್ನು ಅಭ್ಯಾಸ ಮಾಡಿಸಿ, ಅವರ ರಕ್ಷಣೆ ಅವರೇ ಮಾಡಿಕೊಳ್ಳಲಿ’ ಎಂದರು.
ಜಟಿಗೇಶ್ವರ ದೇವಸ್ಥಾನದ ಬಳಿಯಿಂದ ಮಾವಿನಕಟ್ಟೆ ವರೆಗೆ ಶೋಭಾ ಯಾತ್ರೆ ನಡೆಯಿತು. ಹಿಂದೂ ಜನಜಾಗೃತಿ ಸಮಿತಿ ಅಧ್ಯಕ್ಷ ಅಶೋಕ್ ಕಾರ್ಗದ್ದೆ, ಗೌರವಾಧ್ಯಕ್ಷ ಗುರುದೇವ್ ಗೌಡ, ಕಾರ್ಯದರ್ಶಿ ಗುರು ಭಟ್, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್, ಮುಖಂಡರಾದ ಎಸ್.ಎನ್.ರಾಮಸ್ವಾಮಿ ಇದ್ದರು.