ಹುಬ್ಬಳ್ಳಿ: ಶಾಸಕ ಅರವಿಂದ ಬೆಲ್ಲದ ನವದೆಹಲಿ ಭೇಟಿ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಶನಿವಾರ ನಗರದಲ್ಲಿ ಪ್ರತಿಕ್ರಿಯಿಸಿದ ಸಚಿವ ಜಗದೀಶ ಶೆಟ್ಟರ್ ‘ಇನ್ನೊಬ್ಬರ ಮನಸ್ಸಿನಲ್ಲಿ ಇರುವುದು ನಾ ಹೇಗೆ ಹೇಳಲಿ, ನೀವು ಅವರನ್ನೇ ಕೇಳಬೇಕು’ ಎಂದರು.
’ರಾಜ್ಯದಲ್ಲಿ ಸಿ.ಎಂ. ಬದಲಾವಣೆ ಇಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟವಾಗಿ ಹೇಳಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಕೋವಿಡ್ ನಿಯಂತ್ರಿಸುವುದು ಮಾತ್ರ ನಮ್ಮೆಲ್ಲರ ಗುರಿ. ಸಂಪುಟ ಪುನರ್ ರಚನೆಯ ಬಗ್ಗೆಯೂ ಸದ್ಯಕ್ಕೆ ಏನೂ ಇಲ್ಲ. ನನ್ನ ಖಾತೆಗೆ ಸಂಬಂಧಿಸಿದ ವಿಚಾರವಾಗಿ ಕೇಂದ್ರದ ನಾಯಕರನ್ನು ಭೇಟಿಯಾಗಲು ನಾನೂ ದೆಹಲಿಗೆ ಹೋಗುತ್ತೇನೆ. ಅದಕ್ಕೂ ವಿಶೇಷ ಅರ್ಥ ಕಲ್ಪಿಸುವುದು ಬೇಡ’ ಎಂದರು.
ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿಯನ್ನು ಪುನರ್ ಸ್ಥಾಪಿಸಲಾಗುವುದು ಎಂದು ಕಾಂಗ್ರೆಸ್ನ ಹಿರಿಯ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ದಿಗ್ವಿಜಯ ಸಿಂಗ್ ಹೇಳಿಕೆ ಬಗ್ಗೆ ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದರು.
ಮಾಧ್ಯಮದವರು ಈ ಕುರಿತು ಕೇಳಿದ ಪ್ರಶ್ನೆಗೆ ಶೆಟ್ಟರ್ ‘ಜಮ್ಮು ಕಾಶ್ಮೀರದಲ್ಲಿ ಉಗ್ರಗಾಮಿಗಳ ನೆಲೆಗೆ ಅವಕಾಶ ಮಾಡಿಕೊಟ್ಟು ದೇಶವನ್ನು ಹಾಳು ಮಾಡಿದ್ದೇ ಕಾಂಗ್ರೆಸ್. 370ನೇ ವಿಧಿ ರದ್ದು ಮಾಡಿದ ಬಳಿಕ ಅಲ್ಲಿ ಪ್ರವಾಸೋದ್ಯಮ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಅಭಿವೃದ್ಧಿ ಪರ್ವ ಶುರುವಾಗಿದೆ. ದಿಗ್ವಿಜಯ ಸಿಂಗ್ ಈ ಹೇಳಿಕೆ ಕಾಂಗ್ರೆಸ್ನ ಮೂರ್ಖತನದ ಪರಮಾವಧಿ’ ಎಂದು ಟೀಕಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.