ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಕ್ಕಲಿಗರಿಗೆ ದೇಶದ್ರೋಹಿ ಪಟ್ಟ ನೀಡುವ ಯತ್ನ: ಇತಿಹಾಸ ತಜ್ಞ ತಲಕಾಡು ಚಿಕ್ಕರಂಗೇಗೌಡ

ಒಕ್ಕಲು ಕುಟುಂಬಗಳಿಗೆ ನಾಥೂರಾಂ ಗೂಡ್ಸೆ ವಂಶಸ್ಥರ ಸ್ಥಿತಿ; ತಲಕಾಡು ಚಿಕ್ಕರಂಗೇಗೌಡ
Last Updated 2 ಮಾರ್ಚ್ 2023, 13:57 IST
ಅಕ್ಷರ ಗಾತ್ರ

ಮಂಡ್ಯ: ‘ಬಿಜೆಪಿ, ಸಂಘ ಪರಿವಾರ ಟಿಪ್ಪು ಕೊಂದ ದ್ರೋಹವನ್ನು ಒಕ್ಕಲಿಗರ ತಲೆಗೆ ಕಟ್ಟುವ ಪ್ರಯತ್ನ ಮಾಡುತ್ತಿವೆ. ಇತಿಹಾಸದಲ್ಲಿ ಇಲ್ಲದ ಉರಿಗೌಡ, ದೊಡ್ಡನಂಜೇಗೌಡ ಎಂಬ ಹೆಸರುಗಳನ್ನಿಟ್ಟಕೊಂಡು ರೈತ ಸಮುದಾಯಕ್ಕೆ ದೇಶದ್ರೋಹಿ ಸ್ಥಾನ ನೀಡುತ್ತಿವೆ’ ಎಂದು ಇತಿಹಾಸ ತಜ್ಞ ಡಾ.ತಲಕಾಡು ಚಿಕ್ಕರಂಗೇಗೌಡ ಗುರುವಾರ ಹೇಳಿದರು.

‘ಟಿಪ್ಪು ಹೇಗೆ ಸತ್ತ ಎಂಬ ಬಗ್ಗೆ ಯಾವುದೇ ಗೊಂದಲಗಳಿಲ್ಲ, ಕ್ಷಣಕ್ಷಣದ ಮಾಹಿತಿಯನ್ನು ಬ್ರಿಟಿಷರು ಬರೆದಿಟ್ಟಿದ್ದಾರೆ. ಅನಾಮಧೇಯ ವ್ಯಕ್ತಿ ಹಾರಿಸಿದ ಗುಂಡಿನಿಂದ ಟಿಪ್ಪು ಸತ್ತ ಎನ್ನುವ ದಾಖಲೆಗಳಿವೆ. ಆದರೆ, ರಾಜಕೀಯ ಲಾಭಕ್ಕಾಗಿ ಬಿಜೆಪಿ ಮುಖಂಡರು ದಾಖಲೆಗಳಿಲ್ಲದ, ಆಧಾರವಿಲ್ಲದ ಕಾಲ್ಪನಿಕ ವ್ಯಕ್ತಿಗಳ ಹೆಸರಿನಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬರು ಹಾಕಿದ ಆಧಾರ ರಹಿತ ಸಂದೇಶ ನಂಬಿ ಬಿಜೆಪಿ ಮುಖಂಡರು ಒಕ್ಕಲಿಗರ ಮೇಲೆ ದ್ರೋಹದ ಆರೋಪ ಹೊರಿಸುತ್ತಿದ್ದಾರೆ. ಈ ಆರೋಪದಿಂದ ಗಾಂಧೀಜಿಯನ್ನು ಕೊಂದ ನಾಥೂರಾಂ ಗೂಡ್ಸೆ ವಂಶಸ್ಥರ ಸ್ಥಿತಿ ಒಕ್ಕಲಿಗ ಸಮುದಾಯದ ಮೇಲೂ ಬರುವ ಅಪಾಯವಿದೆ. ಟಿಪ್ಪು ಒಕ್ಕಲಿಗರಿಗೆ ಭೂಮಿ ಕೊಟ್ಟಿದ್ದಾನೆ, ಅಂಥವರು ಟಿಪ್ಪುವನ್ನು ಕೊಲ್ಲಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

‘ಹಿಂದೆ ರಾಜರನ್ನು ಕೊಂದವರೇ ಮುಂದಿನ ರಾಜರಾಗುತ್ತಿದ್ದರು. ಉರಿಗೌಡ, ದೊಡ್ಡನಂಜೇಗೌಡರೇ ಟಿಪ್ಪುವನ್ನು ಕೊಂದ ಎಂದರೆ ಅವರನ್ನೇಕೆ ಮೈಸೂರು ರಾಜರನ್ನಾಗಿ ಮಾಡಲಿಲ್ಲ, ಏಕೆ ಮುಮ್ಮಡಿ ಕೃಷ್ಣರಾಜ ಒಡೆಯರ್‌ ಅವರನ್ನು ಬ್ರಿಟೀಷರು ಸಿಂಹಾಸನದಲ್ಲಿ ಕೂರಿಸಿದರು? ಈಗಲಾದರೂ ಟಿಪ್ಪು ಕೊಂದ ಉರಿಗೌಡ, ದೊಡ್ಡನಂಜೇಗೌಡರ ವಂಶಸ್ಥರಿಗೆ ನ್ಯಾಯ ಒದಗಿಸಿ ಮೈಸೂರು ಅರೆಮನೆಯನ್ನು ಬಿಟ್ಟಕೊಡುತ್ತೀರಾ’ ಎಂದು ಸವಾಲು ಹಾಕಿದರು.

ಲೇಖಕ ಎಲ್‌.ಎನ್‌.ಮುಕುಂದರಾಜ್‌ ಮಾತನಾಡಿ ‘ಜನಪದ ಕವಿಗಳು ಟಿಪ್ಪುವಿಗೆ ಹುಲಿ ಎಂಬ ಬಿರುದು ಕೊಟ್ಟಿದ್ದಾರೆ. ಲಾವಣಿಗಳಲ್ಲಿ ಟಿಪ್ಪು ಸಾಧನೆಗಳ ವರ್ಣನೆ ಇದೆ. ಜಾತ್ಯತೀತ ಜಿಲ್ಲೆಯಾಗಿರುವ ಮಂಡ್ಯವನ್ನು ಕೈವಶ ಮಾಡಿಕೊಳ್ಳಲು ಬಿಜೆಪಿ ಮುಖಂಡರು ಉರಿಗೌಡ, ದೊಡ್ಡನಂಜೇಗೌಡ ಎಂಬ ಕಲ್ಪನೆಯ ಹೆಸರು ಸೃಷ್ಟಿಸಿದ್ದಾರೆ’ ಎಂದರು.

ಸಾಹಿತಿ ಕಾಳೇಗೌಡ ನಾಗವಾರ, ವಿವಿಧ ಸಂಘಟನೆಗಳ ಮುಖಂಡರಾದ ರೇಣುಕಮ್ಮ, ಮಂಜು ಇದ್ದರು.

ಮರಡು ಸಹೋದರರ ಚಿತ್ರಗಳ ಅಪಪ್ರಚಾರ

ವಕೀಲ ರಮೇಶ್‌ಗೌಡ ಮಾತನಾಡಿ ‘ತಮಿಳುನಾಡಿನ ಶಿವಗಂಗೈ ಸಂಸ್ಥಾನದ ರಾಜರಾಗಿದ್ದ ಮರಡು ಸಹೋದರರ ಚಿತ್ರಗಳನ್ನು ಬಿಜೆಪಿ ಮುಖಂಡರು ಉರಿಗೌಡ, ದೊಡ್ಡನಂಜೇಗೌಡ ಎಂದು ಬಿಂಬಿಸುತ್ತಿದ್ದಾರೆ’ ಎಂದು ಆರೋಪಿಸಿದರು. ಮರಡು ಸಹೋದರರ ಚಿತ್ರಗಳನ್ನು ಈ ಸಂದರ್ಭದಲ್ಲಿ ಪ್ರದರ್ಶಿದರು.

‘ಪೆರಿಯ ಮರಡು, ಚಿನ್ನ ಮರಡು ಎಂಬ ಸಹೋದರರು ಬ್ರಿಟೀಷರ ವಿರುದ್ಧ ಗೆರಿಲ್ಲಾ ಯುದ್ಧ ಸಾರಿದ್ದರು. ಅವರನ್ನು 1801ರಲ್ಲಿ ಗಲ್ಲಿಗೇರಿಸಲಾಯಿತು. 2004ರಲ್ಲಿ ಅವರ ಹೆಸರಿನಲ್ಲಿ ಅಂಚೆ ಚೀಟಿ ತರಲಾಗಿದೆ. ‘ಶಿವಗಂಗಾ ಸೀಮೈ’ ಎಂಬ ತಮಿಳು ಚಲನಚಿತ್ರವನ್ನೂ ನಿರ್ಮಿಸಲಾಗಿದೆ. ಇತಿಹಾಸ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರರ ಚಿತ್ರವನ್ನು ದುರುಪಯೋಗ ಮಾಡಿಕೊಂಡಿರುವ ಬಿಜೆಪಿ ಮುಖಂಡರು ಕಾಲ್ಪನಿಕ ವ್ಯಕ್ತಿಗಳ ಹೆಸರಿನಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT