ಬೆಂಗಳೂರು: ‘ಈ ಜೂನ್ನಿಂದ ಸೆಪ್ಟೆಂಬರ್ವರೆಗಿನ ಮುಂಗಾರು ಅವಧಿಯಲ್ಲಿ ಸಾಧಾರಣ ಮಳೆ ಸುರಿಯಲಿದೆ’ ಎಂದು ಹಿರಿಯ ಭೂವಿಜ್ಞಾನಿ ಡಾ.ಎಚ್.ಎಸ್.ಎಂ.ಪ್ರಕಾಶ್ ತಿಳಿಸಿದ್ದಾರೆ.
‘ಈ ಮುಂಗಾರಿನಲ್ಲಿ ಸಾಧಾರಣ ಮಳೆ ನಿರೀಕ್ಷಿಸಬಹುದು. 2018 ಮತ್ತು 2019ರ ಅವಧಿಯಲ್ಲಿ ನಡೆದ ಕೆಲವು ವಿಶೇಷ ಅಪರೂಪದ ಭೂವೈಜ್ಞಾನಿಕ ಘಟನೆಗಳು ಮತ್ತು ಆವಿ ಮೂಲಗಳು ಈ ವರ್ಷ ಸಕ್ರಿಯವಾಗಿಲ್ಲ’.
‘ಕೊಡಗು ಮತ್ತು ಕೇರಳ ಪ್ರಾಂತ್ಯಗಳಿಗೆ ವಿಶೇಷ ಸಿದ್ಧತೆಗಳ ಅವಶ್ಯಕತೆ ಇರುವುದಿಲ್ಲ. ಹವಾಮಾನ ದುರಂತಗಳು ವಿರಳವಾಗಿರಲಿವೆ’ ಎಂದೂ ಹೇಳಿದ್ದಾರೆ.
ವಿಜಯಪುರ, ಬೆಳಗಾವಿಯಲ್ಲಿ ಮಳೆ: ವಿಜಾಪುರರ ಜಿಲ್ಲೆಯ ತಿಕೋಟಾ, ಕೊಲ್ಹಾರ, ದೇವರ ಹಿಪ್ಪರಗಿ, ಬಸವನ ಬಾಗೇವಾಡಿ, ತಾಳಿಕೋಟೆ ವ್ಯಾಪ್ತಿಯಲ್ಲಿ ಗುಡುಗು, ಗಾಳಿಯ ಅಬ್ಬರದೊಂದಿಗೆ ಶುಕ್ರವಾರ ಧಾರಾಕಾರ ಮಳೆಯಾಗಿದೆ.
ಬೆಳಗಾವಿ ಜಿಲ್ಲೆಯಚಿಕ್ಕೋಡಿ ತಾಲ್ಲೂಕಿನ ನಾಗರಮುನ್ನೋಳಿ, ಜಾಗನೂರು, ಗೋಕಾಕ ತಾಲ್ಲೂಕಿನ ವಿವಿಧೆಡೆ ಹಾಗೂ ಬಾಗಲಕೋಟೆ ನಗರದಲ್ಲಿ ಧಾರಾಕಾರ ಮಳೆಯಾಗಿದೆ.