ಚಿಕ್ಕಬಳ್ಳಾಪುರ: ದೇಶದ ಇತಿಹಾಸದಲ್ಲಿ ಅನೇಕ ಹೋರಾಟದ ಸ್ಮರಣೆ ಮಾಡುವ ಸಂದರ್ಭ ಇದು. ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟವನ್ನು ಇಂದಿಗೂ ವಿಶ್ವ ಅಚ್ಚರಿಯಿಂದ ಕಾಣುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಅಮೃತ ಮಹೋತ್ಸವದಲ್ಲಿ ಮಾತನಾಡಿದ ಅವರು, ಕಿತ್ತೂರು, ಸುರಪುರ, ಈಸೂರು, ವಿದುರಾಶ್ವತ್ಥ ಹೋರಾಟಗಳು ದೇಶದಲ್ಲಿ ಮಹತ್ವವಾದವು ಎಂದು ಸ್ಮರಿಸಿದರು.
ವಿದುರಾಶ್ವತ್ಥದ ಹೋರಾಟ ಐತಿಹಾಸಿಕವಾದುದು. ಈ ಸ್ಥಳ ಧಾರ್ಮಿಕ ಕೇಂದ್ರವೂ ಆಗಿದೆ. ಈ ಸಣ್ಣ ಹಳ್ಳಿಯಲ್ಲಿ ನಡೆದ ಹೋರಾಟ ದೇಶದ ಇತಿಹಾಸದಲ್ಲಿ ದಾಖಲಾಗಿದೆ ಎಂದು ಹೇಳಿದರು.
ಈ ಮಹನೀಯರತ್ಯಾಗ ಬಲಿದಾನವೇ ನಮಗೆ ಸ್ಪೂರ್ತಿ. ಸ್ವಾತಂತ್ರ್ಯ ಉಳಿಸಿಕೊಂಡು ದೇಶದ ಕೀರ್ತಿ ಹೆಚ್ಚಿಸಬೇಕು ಎಂದರು. ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸ ವನ್ನು ಮಕ್ಕಳಿಗೆ ಪರಿಚಯ ಮಾಡಿಸಿಕೊಡಬೇಕಾಗಿದೆ. ಪರಿಣತರಿಂದ ಶಾಲಾ ಕಾಲೇಜುಗಳಲ್ಲಿ ಐತಿಹಾಸಿಕ ಹೋರಾಟಗಳ ಬಗ್ಗೆ ತಿಳಿವಳಿಕೆ ಮೂಡಿಸಲಾಗುವುದು ಎಂದು ಹೇಳಿದರು.