ನವದೆಹಲಿ: ಚೆನ್ನೈ–ಬೆಂಗಳೂರು–ಮೈಸೂರು ಹಾಗೂ ದೇಶದ ಇತರ ಆರು ಮಾರ್ಗಗಳಲ್ಲಿ ಹೈ ಸ್ಪೀಡ್ ರೈಲು ಯೋಜನೆ ಆರಂಭಿಸಲು ಸರ್ವೆ ಹಾಗೂ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಶುಕ್ರವಾರ ಲಿಖಿತ ಉತ್ತರ ನೀಡಿರುವ ಅವರು, ‘ಮುಂಬೈ–ಅಹಮದಾಬಾದ್ ಹೈ ಸ್ಪೀಡ್ ರೈಲು ಯೋಜನೆಗೆ ಈಗಾಗಲೇ ಅನುಮೋದನೆ ನೀಡಲಾಗಿದೆ. ಈ ಯೋಜನೆಯನ್ನು ಜಪಾನ್ ಸರ್ಕಾರದ ಹಣಕಾಸಿನ ನೆರವಿನಿಂದ ಅನುಷ್ಠಾನಗೊಳಿಸಲಾಗುತ್ತದೆ’ ಎಂದು ವಿವರ ನೀಡಿದ್ದಾರೆ.
ಮೆಮು ರೈಲು ಇಲ್ಲ: ಚಿಕ್ಕಬಾಣಾವರ–ಹಾಸನ, ಹಾಸನ–ಸುಬ್ರಹ್ಮಣ್ಯ ರಸ್ತೆ, ಸುಬ್ರಹ್ಮಣ್ಯ ರಸ್ತೆ– ಮಂಗಳೂರು ಮಾರ್ಗದಲ್ಲಿ ಮೆಮು ರೈಲು ಯೋಜನೆ ಆರಂಭಿಸುವ ಪ್ರಸ್ತಾವ ಇಲ್ಲ ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ರಾಜ್ಯಸಭೆಯಲ್ಲಿ ಸದಸ್ಯ ನಾರಾಯಣ ಕೊರಗಪ್ಪ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಅವರು, ‘ಈ ಮಾರ್ಗದಲ್ಲಿ ವಿದ್ಯುದೀಕರಣ ಇನ್ನೂ ಪೂರ್ಣಗೊಂಡಿಲ್ಲ. ಹಾಗಾಗಿ, ಮೆಮು ರೈಲು ಯೋಜನೆ ಕಾರ್ಯಸಾಧುವಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
‘ಚಿಕ್ಕಬಾಣಾವರ–ಸೋಲೂರು (33 ಕಿ.ಮೀ) ಮಾರ್ಗದಲ್ಲಿ ವಿದ್ಯುದೀಕರಣ ಪೂರ್ಣಗೊಂಡಿದೆ. ಸೋಲೂರು–ಹಾಸನ (133 ಕಿ.ಮೀ), ಹಾಸನ– ಸುಬ್ರಹ್ಮಣ್ಯ (87 ಕಿ.ಮೀ), ಸುಬ್ರಹ್ಮಣ್ಯ–ಮಂಗಳೂರು ಜಂಕ್ಷನ್ (96 ಕಿ.ಮೀ) ಮಾರ್ಗದಲ್ಲಿ ವಿದ್ಯುದೀಕರಣ ಕಾಮಗಾರಿ ನಡೆಯುತ್ತಿದೆ’ ಎಂದಿದ್ದಾರೆ.