ಮಂಗಳೂರು: ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ ಆರೋಪಿಗಳಿಗೆ ನೆರವಾದವರ ಪತ್ತೆ ಸಲುವಾಗಿ ರಾಷ್ಟ್ರೀಯ ತನಿಖಾ ಸಂಸ್ಥೆಯ ತಂಡ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಸೋಮವಾರ ಶೋಧ ನಡೆಸಿದೆ.
‘ಭಾನುವಾರದಿಂದಲೇ ಜಿಲ್ಲೆಯಲ್ಲಿ ಬೀಡುಬಿಟ್ಟಿರುವ ತನಿಖಾ ತಂಡ ಬಂಟ್ವಾಳ ನಗರ ಠಾಣೆ ವ್ಯಾಪ್ತಿಯ ನಂದಾವರದಲ್ಲಿ ನಾಲ್ವರು ಯುವಕರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದೆ. ಆ ಯುವಕರ ಖಾತೆಯಿಂದ ಸಂಶಯಾಸ್ಪದ ರೀತಿಯಲ್ಲಿ ಹಣ ವರ್ಗಾವಣೆ ಆಗಿತ್ತು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪಾಣೆ ಮಂಗಳೂರು ಮತ್ತು ಮೆಲ್ಕಾರ್ನ ಸೈಬರ್ ಸೆಂಟರ್ಗಳಿಗೂ ಎನ್ಐಎ ಅಧಿಕಾರಿಗಳು ಭೇಟಿ ನೀಡಿ ದಾಖಲೆಗಳನ್ನು ಕಲೆ ಹಾಕಿದ್ದಾರೆ ಎಂದು ಗೊತ್ತಾಗಿದೆ. ನಿರ್ದಿಷ್ಟವಾಗಿ ಯಾವ ಪ್ರಕರಣಕ್ಕೆ ಸಂಬಂಧಿಸಿ ದಾಳಿ ನಡೆಸಲಾಗಿದೆ ಎಂಬುದನ್ನು ಎನ್ಐಎ ಇನ್ನೂ ಬಹಿರಂಗಪಡಿಸಿಲ್ಲ.
ಜೀಪ್ ಡಿಕ್ಕಿ: ಪುತ್ತೂರಿನ ಸಂಪ್ಯದಲ್ಲಿ ಸ್ಥಳೀಯ ಪೊಲೀಸರ ಜೊತೆ ಪ್ರಕರಣವೊಂದರ ತನಿಖೆಗೆ ತೆರಳುವ ವೇಳೆ ಎನ್ಐಎ ಅಧಿಕಾರಿಗಳಿದ್ದ ಪೊಲೀಸ್ ಜೀಪ್ ದ್ವಿಚಕ್ರ ವಾಹನವೊಂದಕ್ಕೆ ಭಾನುವಾರ ರಾತ್ರಿ ಡಿಕ್ಕಿ ಹೊಡೆದು ವಾಹನ ಸವಾರ ಪಾಣಾಜೆಯ ಲಕ್ಷ್ಮಣ ನಾಯ್ಕ (50) ಮೃತಪಟ್ಟಿದ್ದಾರೆ.