ತುಮಕೂರು: ‘ನಮಗೆ ಗೊತ್ತಿದ್ದಂತೆ ಪಕ್ಷ ವಿರೋಧಿ ಚಟುವಟಿಕೆಯನ್ನು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮಾಡಿಲ್ಲ. ಮೀಸಲಾತಿಗಾಗಿ ಆಗ್ರಹಿಸಿ ಪಂಚಮಸಾಲಿ ಸಮುದಾಯ ನಡೆಸುತ್ತಿರುವ ಹೋರಾಟಕ್ಕೆ ಯತ್ನಾಳ್ ಚಾಲನೆ ನೀಡಿದರು. ನಮ್ಮ ಸಮಾಜದ ಒಗ್ಗಟ್ಟು ನೋಡಿ ಅದನ್ನು ಸಹಿಸದ ಕೆಲವರು ರಾಜಕೀಯ ದುರುದ್ದೇಶದಿಂದ ನೋಟಿಸ್ ಕೊಡಿಸಿದ್ದಾರೆ’ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ಪರವಾಗಿ ಮತ್ತು ಸದನದಲ್ಲಿ ಮೀಸಲಾತಿ ಹೋರಾಟದ ಪರವಾಗಿ ಅವರು ಧ್ವನಿ ಎತ್ತಿದ್ದರು. ಕೆಲವು ಕಾಣದ ಶಕ್ತಿಗಳು ಬಿಜೆಪಿ ಕೇಂದ್ರ ನಾಯಕರಿಗೆ ತಪ್ಪು ಮಾಹಿತಿ ನೀಡಿ ನೋಟಿಸ್ ಕೊಡಿಸಿದ್ದಾರೆ’ ಎಂದು ಆರೋಪಿಸಿದರು.
ಮುಖ್ಯವಾಗಿ ಪಂಚಮಸಾಲಿ ಸಮಾಜದ ನಾಯಕರನ್ನೇ ಟಾರ್ಗೆಟ್ ಮಾಡಿದ್ದಾರೆ. ರಾಜ್ಯದ ವರಿಷ್ಠರು ಕೇಂದ್ರದ ವರಿಷ್ಠರಿಗೆ ಮನವರಿಕೆ ಮಾಡಿಕೊಟ್ಟು ನೋಟಿಸ್ ಹಿಂಪಡೆಯಬೇಕು. ಇಲ್ಲದಿದ್ದರೆ ಫೆ. 21ರ ಸಮಾವೇಶದಲ್ಲಿ ನಮ್ಮ ಸಮಾಜದ ಜನರು ಆಕ್ರೋಶಗೊಳ್ಳುವರು. ಮುಂದಿನ ಅವಘಡಕ್ಕೆ ರಾಜ್ಯ ಸರ್ಕಾರವೇ ಹೊಣೆ’ ಎಂದು ಎಚ್ಚರಿಸಿದರು.
‘ಸರ್ಕಾರ ತಪ್ಪು ಮಾಡಿದಾಗ ಅವರು ನೇರವಾಗಿ ಮಾತನಾಡಿದ್ದು ತಪ್ಪೇ’ ಎಂದು ಸ್ವಾಮೀಜಿ ಪ್ರಶ್ನಿಸಿದರು.