ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವೇದಿಕೆಗೆ ಆಗಮಿಸುತ್ತಿದ್ದಂತೆ ಹರಿಹರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾದ ಮಾಜಿ ಶಾಸಕ ಬಿ.ಪಿ. ಹರೀಶ್, ಮುಖಂಡರಾದ ಚಂದ್ರಶೇಖರ್ ಪೂಜಾರ್ ಹಾಗೂ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವಿರೇಶ್ ಹನಗವಾಡಿ ಅವರ ಬೆಂಬಲಿಗರು ಫೋಟೊ ಪ್ರದರ್ಶಿಸಿ ಘೋಷಣೆಗಳನ್ನು ಕೂಗಿದರು. ಇದರಿಂದ ಸಿಟ್ಟಿಗೆದ್ದ ಮುಖ್ಯಮಂತ್ರಿ ಮೈಕ್ ಬಳಿ ಬಂದು, ‘ಹರಿಹರದಲ್ಲಿ ಈ ಬಾರಿ ನೂರಕ್ಕೆ ನೂರು ಬಿಜೆಪಿಯೇ ಗೆಲ್ಲುತ್ತದೆ. ಅಭಿಮಾನಿಗಳು ಹೀಗೆ ಫೋಟೊ ಹಿಡಿಯುವುದು ಕೆಲಸಕ್ಕೆ ಬರುವುದಿಲ್ಲ. ಒಗ್ಗಟ್ಟು ಪ್ರದರ್ಶಿಸಬೇಕು. ಫೋಟೊ ಕೆಳಗೆ ಇಡಿ’ ಎಂದು ಗದರಿದರು.