ಬೆಂಗಳೂರು: ಹಾನಗಲ್ ಮತ್ತು ಸಿಂದಗಿ ಉಪಚುನಾವಣೆ ಪ್ರಚಾರಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಇದೇ 17ರಿಂದ ಪ್ರಚಾರ ನಡೆಸಲಿದ್ದಾರೆ. ಬಿಜೆಪಿಯ ಶಾಸಕ ಬಿ.ಎಸ್.ಯಡಿಯೂರಪ್ಪ ಅವರು ಇದೇ 21 ರಿಂದ ಎರಡೂ ಕ್ಷೇತ್ರಗಳಲ್ಲಿ ನಾಲ್ಕು ದಿನಗಳ ಕಾಲ ಚುನಾವಣಾ ಪ್ರಚಾರ ನಡೆಸಲಿದ್ದಾರೆ.
ಬೊಮ್ಮಾಯಿ ಅವರು ವಿಜಯದಶಮಿ ಪ್ರಯುಕ್ತ ಯಡಿಯೂರಪ್ಪ ಅವರನ್ನು ‘ಕಾವೇರಿ’ ನಿವಾಸದಲ್ಲಿ ಭೇಟಿ ಮಾಡಿ ಶುಭಾಶಯ ಕೋರಿ ಮಾತುಕತೆ ನಡೆಸಿದರು.
ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಅಕ್ಟೋಬರ್ 17 ರಿಂದ ಹಾನಗಲ್ನಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳುತ್ತೇನೆ. ಆ ಬಳಿಕ ಸಿಂದಗಿಯಲ್ಲಿ ಎರಡು ದಿನಗಳ ಪ್ರಚಾರ ನಡೆಸುತ್ತೇನೆ ಎಂದರು.
ಶಾಸಕ ಮಸಾಲ ಜಯರಾಂ ಅವರ ಅಸಮಾಧಾನದ ಬಗ್ಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಅವರು ನನ್ನ ಒಳ್ಳೆಯ ಸ್ನೇಹಿತರು ಎಂದರು.
ಬಿಎಸ್ವೈ ಚುನಾವಣಾ ಪ್ರಚಾರ: ಯಡಿಯೂರಪ್ಪ ಅವರು ಇದೇ ತಿಂಗಳ 20 ಅಥವಾ 21 ರಿಂದ ಚುನಾವಣಾ ಪ್ರಚಾರಕ್ಕೆ ತೆರಳಲಿದ್ದಾರೆ. ಮೊದಲ ಹಂತವಾಗಿ ನಾಲ್ಕು ದಿನಗಳ ಪ್ರಚಾರ ನಡೆಸುವ ಅವರು ಇದೇ 26 ರ ಬಳಿಕ ಇನ್ನೊಂದು ಸುತ್ತಿನ ಪ್ರಚಾರಕ್ಕೆ ತೆರಳಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.