ಜೀವ ಉಳಿಸಲು ದೇವರೇ ಅಧಿಕಾರದಿಂದ ಕೆಳಗಿಳಿಸಿದ: ಎಚ್ಡಿಕೆ

ಬೆಂಗಳೂರು: ‘ನನ್ನನ್ನು ಅಧಿಕಾರದಿಂದ ಕೆಳಕ್ಕೆ ಇಳಿಸಿದ್ದು 17 ಜನರಲ್ಲ. ಇಂತಹ ಸಂದರ್ಭದಲ್ಲಿ ನನ್ನ ಜೀವ ಉಳಿಸುವುದಕ್ಕಾಗಿ ದೇವರೇ ನನ್ನನ್ನು ಅಧಿಕಾರದಿಂದ ಕೆಳಕ್ಕೆ ಇಳಿಸಿದ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ವಿವಿಧ ಪಕ್ಷಗಳನ್ನು ತೊರೆದು ಜೆಡಿಎಸ್ ಸೇರಿದ ಹಾವೇರಿ ಜಿಲ್ಲೆಯ ಹಲವರನ್ನು ಗುರುವಾರ ಜೆಡಿಎಸ್ ಪ್ರಧಾನ ಕಚೇರಿಯಲ್ಲಿ ಪಕ್ಷಕ್ಕೆ ಸ್ವಾಗತಿಸಿದ ಬಳಿಕ ಮಾತನಾಡಿದ ಅವರು, ‘ನಾನು ಸಂತೋಷದಿಂದ ಅಧಿಕಾರ ಬಿಟ್ಟು ಹೊರಗೆ ಬಂದೆ. ಈ ಸಂದರ್ಭದಲ್ಲಿ ನನ್ನ ಜೀವ ಉಳಿಯಬೇಕು ಎಂದು ದೇವರೇ ತೆಗೆದುಕೊಂಡ ನಿರ್ಧಾರ ಅದು. ಆ 17 ಜನರು ನನ್ನ ಜೀವ ಉಳಿಸಿದ ಪುಣ್ಯಾತ್ಮರು ಅಂದುಕೊಳ್ಳುತ್ತೇನೆ. ಅವರಿಗೆ ಧನ್ಯವಾದ ಹೇಳುತ್ತೇನೆ’ ಎಂದರು.
ಅಧಿಕಾರಕ್ಕಾಗಿ ಕಚ್ಚಾಟ: ಚುನಾವಣೆಗೆ ಇನ್ನೂ ಎರಡು ವರ್ಷ ಇದೆ. ಈಗಲೇ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ಕಚ್ಚಾಟ ಆರಂಭವಾಗಿದೆ. ಎಂಟು ಮಂದಿ ನಾಯಕರು ಮುಖ್ಯಮಂತ್ರಿ ಹುದ್ದೆಗಾಗಿ ಗರಿ ಗರಿ ಬಟ್ಟೆ ಹೊಲಿಸಿಕೊಂಡು ಸಿದ್ಧವಾಗಿದ್ದಾರೆ. ಮತ್ತೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ವಿಧಾನಸಭೆಯಲ್ಲೇ ಘೋಷಿಸಿದ್ದ ಸಿದ್ದರಾಮಯ್ಯ ಈಗ ಮುಖ್ಯಮಂತ್ರಿಯಾಗಲು ಹೊರಟಿದ್ದಾರೆ ಎಂದು ಟೀಕಿಸಿದರು.
ಬಿಜೆಪಿಯಲ್ಲೂ ಭಿನ್ನಮತ ಜೋರಾಗಿದೆ. ಸಚಿವರೇ ಬಹಿರಂಗವಾಗಿ ಇದನ್ನು ಹೇಳುತ್ತಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಮೇರೆ ಮೀರಿದೆ. ಬಿಜೆಪಿಯ ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ಪಕ್ಷ ಸಮರ್ಥವಾಗಿ ಹೋರಾಟ ಮಾಡುತ್ತಿಲ್ಲ. ಜನರು ಕೋವಿಡ್ನಿಂದ ಸಾಯುತ್ತಿರುವಾಗಲೂ ಬಿಜೆಪಿ ಹಣ ಲೂಟಿ ಮಾಡುತ್ತಿದೆ. ಕಾಂಗ್ರೆಸ್ ಮೌನಕ್ಕೆ ಶರಣಾಗಿದೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಕುಮಾರಸ್ವಾಮಿ ಸುಳ್ಳುಗಳಿಗೆ ಉತ್ತರ ಕೊಡಲ್ಲ: ಸಿದ್ದರಾಮಯ್ಯ
ಇನ್ನು ಆಟ ಶುರು: ‘ಎರಡೂ ರಾಷ್ಟ್ರೀಯ ಪಕ್ಷಗಳಿಗೆ ತಕ್ಕ ಪಾಠ ಕಲಿಸಲು ಸಜ್ಜಾಗುತ್ತಿದ್ದೇವೆ. ಇನ್ನು ನಮ್ಮ ಆಟ ತೋರಿಸುತ್ತೇವೆ. ವಿಧಾನಮಂಡಲದ ಮುಂದಿನ ಅಧಿವೇಶನದ ವೇಳೆಗೆ ಈ ಸರ್ಕಾರದ ಹಲವು ಹಗರಣಗಳನ್ನು ಬಯಲಿಗೆ ಎಳೆಯುವೆ’ ಎಂದು ಕುಮಾರಸ್ವಾಮಿ ಹೇಳಿದರು.
‘ಜೆಡಿಎಸ್ ಕ್ವಾರಂಟೈನ್ನಲ್ಲಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿಕೆ ನೀಡಿದ್ದಾರೆ. ನಿಮ್ಮ (ಬಿಜೆಪಿ) ಸಹವಾಸ ಮಾಡಿದ್ದರಿಂದ ನಮಗೆ ರಾಜಕೀಯ ಕೋವಿಡ್ ಅಂಟಿತ್ತು. ಅದನ್ನು ನಿವಾರಿಸಲು ಕ್ವಾರಂಟೈನ್ನಲ್ಲಿದ್ದೇವೆ. ಮುಂದಿನ ದಿನಗಳಲ್ಲಿ ಏನಾಗುತ್ತದೆ ಕಾದು ನೋಡಿ’ ಎಂದರು.
‘ಬಿಜೆಪಿ ಸರ್ಕಾರದಲ್ಲಿ ಇರುವವರು ಕೈಯಲ್ಲಿ ಅಲ್ಲ, ಜೆಸಿಬಿಯಿಂದ ಸರ್ಕಾರದ ಖಜಾನೆ ಲೂಟಿ ಮಾಡುತ್ತಿದ್ದಾರೆ. ಆದರೂ, ಕೆಲವು ಸ್ವಾಮೀಜಿಗಳು ಇವರೇ ಬೇಕು ಅನ್ನುತ್ತಿದ್ದಾರೆ. ಸ್ವಾಮೀಜಿಗಳು ಏಕೆ ಹೀಗೆ ಹೇಳುತ್ತಿದ್ದಾರೋ ಗೊತ್ತಿಲ್ಲ’ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.