ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಡಿಜಿಪಿ ಬೇನಾಮಿ ಆಸ್ತಿ ನಿರ್ವಹಣೆ: ಇಬ್ಬರ ಮನೆ ಮೇಲೆ ದಾಳಿ

Last Updated 2 ಆಗಸ್ಟ್ 2022, 21:00 IST
ಅಕ್ಷರ ಗಾತ್ರ

ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧಿತ ಐಎಎಸ್‌ ಅಧಿಕಾರಿ ಅಮ್ರಿತ್‌ ಪೌಲ್‌ ಅವರ ಬೇನಾಮಿ ಆಸ್ತಿ ನಿರ್ವಹಣೆ ಮಾಡುತ್ತಿದ್ದ ಇಬ್ಬರ ಮನೆ ಹಾಗೂ ಕಚೇರಿಯ ಮೇಲೆ ಸಿಐಡಿ ತಂಡವು ಮಂಗಳವಾರ ದಾಳಿ ನಡೆಸಿ, ಶೋಧಿಸಿತು. ‌

‘ಕೃಷಿ ಉಪಕರಣಗಳ ಮಾರಾಟ ಕಂಪನಿ ನಡೆಸುತ್ತಿರುವ ಶಂಭುಲಿಂಗಯ್ಯಸ್ವಾಮಿಗೆ ಸೇರಿದ ಕಚೇರಿ, ಸಹಕಾರ ನಗರದ ನಿವಾಸ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕಿನದೊಡ್ಡಬೆಳವಂಗಲದ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕಲ್ಪನಾ ಅವರ ಪತಿ ಹುಸ್ಕೂರು ಆನಂದ್‌ಗೆ ಸೇರಿದ ನಿವಾಸ, ದೇಶಪೇಟೆಯ ಕಚೇರಿ ಮೇಲೆ ಏಕಕಾಲಕ್ಕೆ ನಾಲ್ಕು ಪ್ರತ್ಯೇಕ ತಂಡಗಳು ದಾಳಿ ನಡೆಸಿ, ಆಸ್ತಿಗೆ ಸಂಬಂಧಪಟ್ಟ ಕಾಗದ ಪತ್ರಗಳನ್ನು ವಶಕ್ಕೆ ಪಡೆದುಕೊಂಡಿದೆ’ ಎಂದು ಸಿಐಡಿ ಮೂಲಗಳು ತಿಳಿಸಿವೆ.

ರಿಯಲ್‌ ಎಸ್ಟೇಟ್‌ ಉದ್ಯಮಿ ಆನಂದ್‌ ಮನೆಯಲ್ಲಿ ಬೆಳಿಗ್ಗೆ 9ರಿಂದ ಸಂಜೆ 5ರ ತನಕ ದಾಖಲೆಗಳ ಪರಿಶೀಲನೆ ನಡೆದಿದೆ. ‘ಎಡಿಜಿಪಿಯಾಗಿದ್ದ ಅಮ್ರಿತ್‌ ಪೌಲ್‌ ಅವರ ಆಸ್ತಿಯನ್ನು ಇವರಿಬ್ಬರು ನಿರ್ವಹಣೆ ಮಾಡುತ್ತಿದ್ದರು. ಸಿಐಡಿ ವಿಚಾರಣೆಯಲ್ಲಿ ಪೌಲ್‌ ಈ ವಿಷಯ ಬಾಯಿ ಬಿಟ್ಟಿದ್ದರು’ ಎಂದು ತಿಳಿಸಿವೆ.

ಮತ್ತೆ ಇಬ್ಬರ ಬಂಧನ:ಒಎಂಆರ್‌ ಪ್ರತಿ ತಿದ್ದುವ ಮೂಲಕಪಿಎಸ್‌ಐ ಹುದ್ದೆಗೆ ಆಯ್ಕೆಯಾಗಿದ್ದಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಸಿದ್ದಲಿಂಗಪ್ಪ ಪದವಶಗಿ ಹಾಗೂ ಬೀರಪ್ಪ ಮೇಟಿ ಎಂಬುವರನ್ನು ಸಿಐಡಿ ತಂಡ ಬಂಧಿಸಿ, 10 ದಿನ ಕಾಲ ಸಿಐಡಿ ಕಸ್ಟಡಿಗೆ ಪಡೆದಿದೆ.

‘ಬಂಧಿತ ಸಬ್‌ ಇನ್‌ಸ್ಪೆಕ್ಟರ್‌ ಷರೀಫ್‌ ಕಳ್ಳಿಮನಿ ಹಾಗೂ ನೇಮಕಾತಿ ವಿಭಾಗದ ಹರ್ಷ ಮೂಲಕ ಈ ಇಬ್ಬರು ₹ 40 ಲಕ್ಷದ ಹಣಕಾಸಿನ ವ್ಯವಹಾರ ನಡೆಸಿ ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಿದ್ದರು’ ಎಂದು ತನಿಖಾ ತಂಡ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT