ಬೆಂಗಳೂರು: ನಗರದ ಮಳೆಹಾನಿ ಪ್ರದೇಶಗಳ ವೀಕ್ಷಣೆ ನಡೆಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ನಗರ ಸಂಚಾರ ನಡೆಸಿದರು.
ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾ ಬಳಿಯಿಂದ ಬಿಎಂಟಿಸಿ ವಿಶೇಷ ಬಸ್ ನಲ್ಲಿ ಹೊರಟು ಮುಖ್ಯಮಂತ್ರಿ, ಮೊದಲಿಗೆ ಕುರುಬರಹಳ್ಳಿ ಬಳಿಯ ಜೆ.ಸಿ.ನಗರಕ್ಕೆ ಭೇಟಿ ನೀಡಿದರು.
ಮನೆಗಳಿಗೆ ನೀರು ನುಗ್ಗಿ ತೊಂದರೆಗೆ ಸಿಲುಕಿದ್ದ ಕುಟುಂಬಗಳ ಕಷ್ಟ ಆಲಿಸಿದರು. ರಾಜಕಾಲುವೆ ನೀರು ನುಗ್ಗಿ ಮನೆಯಲ್ಲಿನ ದವಸ ಧಾನ್ಯಗಳು ನೀರು ಪಾಲಾಗಿರುವುದನ್ನು ನಿವಾಸಿಗಳು ಮುಖ್ಯಮಂತ್ರಿ ಅವರ ಗಮನಕ್ಕೆ ತಂದರು. ಸಂತ್ರಸ್ತರಲ್ಲಿ ಕೆಲವರಿಗೆ ಸ್ಥಳದಲ್ಲೇ ₹25 ಸಾವಿರ ಮೊತ್ತದ ಚೆಕ್ ವಿತರಿಸಿದರು.
ಕಮಲಾನಗರ, ಹೆಬ್ಬಾಳ, ಲಗ್ಗೇರೆ, ನಾಗವಾರ, ಎಚ್.ಬಿ.ಆರ್ ಲೇಔಟ್ ನಲ್ಲಿ ಮುಖ್ಯಮಂತ್ರಿ ವೀಕ್ಷಣೆ ನಡೆಸುವರು.
ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಸಚಿವರಾದ ಆರ್.ಅಶೋಕ್, ವಿ.ಸೋಮಣ್ಣ, ಕೆ.ಗೋಪಾಲಯ್ಯ ಜತೆಯಲ್ಲಿದ್ದಾರೆ.