ಬೆಂಗಳೂರು: ಡಿ.ಜೆ.ಹಳ್ಳಿ ಗಲಭೆಗೆ ಕಾರಣವಾದ ಫೇಸ್ಬುಕ್ ಪೋಸ್ಟ್ ಹಾಕಿದ್ದ ಆರೋಪದಲ್ಲಿ ಬಂಧನದಲ್ಲಿರುವ ಪಿ. ನವೀನ್ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಜಾಮೀನು ಅರ್ಜಿ ವಿಚಾರಣೆ ನಡೆಸಿದ 60ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶ ವಿದ್ಯಾಧರ ಶಿರಹಟ್ಟಿ, ‘ಈ ರೀತಿಯ ಪೋಸ್ಟ್ ಹಾಕುವುದನ್ನು ಅಭ್ಯಾಸ ಮಾಡಿಕೊಂಡಿರುವ ನವೀನ್ ವಿರುದ್ಧ ಇರುವ ಆರೋಪಗಳು ಗಂಭೀರವಾದವು.ನವೀನ್ ತಪ್ಪನ್ನು ದಾಖಲೆಗಳು ಮೇಲ್ನೋಟಕ್ಕೆ ಖಾತ್ರಿಪಡಿಸುತ್ತಿವೆ’ ಎಂದರು.
‘ನವೀನ್ ವಿರುದ್ಧದ ಆರೋಪದ ಬಗ್ಗೆಡಿಜಿಟಲ್ ಸಾಕ್ಷ್ಯಗಳಾಗಿರುವ ಕಾರಣ ಅವುಗಳನ್ನು ನಾಶ ಮಾಡುವ ಸಾಧ್ಯತೆ ಇಲ್ಲ. ಹೀಗಾಗಿ ಜಾಮೀನು ನೀಡಬೇಕು’ ಎಂದು ಅರ್ಜಿದಾರರ ಪರ ವಕೀಲರು ಮನವಿ ಮಾಡಿದರು.
‘ನವೀನ್ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾರೆ ಮತ್ತು ಅವರ ವಿರುದ್ಧ2007ರಿಂದ ಈವರೆಗೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಆರು ಪ್ರಕರಣಗಳು ದಾಖಲಾಗಿವೆ. ಜಾಮೀನು ನೀಡುವುದು ಸೂಕ್ತ ಅಲ್ಲ’ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್ಪಿಪಿ) ಪಿ. ಪ್ರಸನ್ನಕುಮಾರ್ ವಾದಿಸಿದರು.
ಗಲಭೆಯಲ್ಲಿ ಭಾಗಿಯಾಗಿರುವ ಆರೋಪದಲ್ಲಿ ಬಂಧನದಲ್ಲಿರುವ ಹಲವರ ಜಾಮೀನು ಅರ್ಜಿಗಳು ಮತ್ತೊಂದು ನ್ಯಾಯಾಲಯದಲ್ಲಿ ಇದೇ ವೇಳೆ ತಿರಸ್ಕೃತಗೊಂಡಿವೆ.