ಚಿಕ್ಕಯ್ಯನಛತ್ರ (ಮೈಸೂರು ಜಿಲ್ಲೆ): ‘ಶೇ 40ರಷ್ಟು ಕಮಿಷನ್ ಪಡೆಯುವ ಸರ್ಕಾರ ಇದಾಗಿದ್ದು, ಎಲ್ಲದರಲ್ಲೂ ಲೂಟಿ ಹೊಡೆಯುತ್ತಿದೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂದಿ ವಾಗ್ದಾಳಿ ನಡೆಸಿದರು.
‘ಭಾರತ್ ಜೋಡೊ’ ಪಾದಯಾತ್ರೆ ಅಂಗವಾಗಿ ಇಲ್ಲಿ ಶನಿವಾರ ಸಂಜೆ ನಡೆದ ‘ಕಾರ್ನರ್ ಮೀಟಿಂಗ್’ನಲ್ಲಿ ಮಾತನಾಡಿದ ಅವರು, ‘ಸಹಾಯಕ ಪ್ರಾಧ್ಯಾಪಕರ ನೇಮಕಾತಿ, ಪಿಎಸ್ಐ ಹಗರಣಗಳು ಬಿಜೆಪಿ ಸರ್ಕಾರದ ಧೋರಣೆಗೆ ಸಾಕ್ಷಿಯಾಗಿವೆ. ಪ್ರತಿ ಇಲಾಖೆಯಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ’ ಎಂದು ದೂರಿದರು.
‘ಅಗತ್ಯ ವಸ್ತುಗಳ ಬೆಲೆಯು ಗಗನಕ್ಕೇರಿದೆ. ನಿರುದ್ಯೋಗ ಪ್ರಮಾಣವು ಹಿಂದೆಂದಿಗಿಂತಲೂ ಹೆಚ್ಚಾಗಿದೆ. ದೇಶವನ್ನು ಸಾಲದಲ್ಲಿ ಮುಳುಗಿಸಿದ್ದಾರೆ. ಸ್ವಾತಂತ್ರ್ಯ ಬಂದಾಗಿನಿಂದ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರದವರೆಗೆ ಇದ್ದ ಸಾಲಕ್ಕಿಂತ, ನರೇಂದ್ರ ಮೋದಿ ಅವರು 8 ವರ್ಷಗಳಲ್ಲಿ ಮಾಡಿರುವ ಸಾಲವು ಮೂರು ಪಟ್ಟು ಹೆಚ್ಚಿದೆ’ ಎಂದು ಆರೋಪಿಸಿದರು.
‘ಬಿಜೆಪಿಯು ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ಚುನಾವಣೆ ನಡೆಸಲು ತಯಾರಿ ನಡೆಸುತ್ತಿದೆ. ಜನರನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಆ ಪಕ್ಷದವರ ಬೂಟಾಟಿಕೆಗೆ ಕರ್ನಾಟಕದ ಜನರು ಮಾರು ಹೋಗದೆ ಈ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯುವ ಕೆಲಸ ಮಾಡುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.