ಬೆಂಗಳೂರು: 'ಬಿಟ್ಕಾಯಿನ್ ವಿಷಯದಲ್ಲಿ ಕಾಂಗ್ರೆಸ್ ನಾಯಕರು ಅನಗತ್ಯವಾಗಿ ಗೊಂದಲ ಉಂಟು ಮಾಡುತ್ತಿದ್ದಾರೆ. ಅವರ ಬಳಿ ಸೂಕ್ತ ದಾಖಲೆಗಳಿದ್ದರೆ ತನಿಖಾಧಿಕಾರಿಗಳಿಗೆ ನೀಡಲಿ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸವಾಲು ಹಾಕಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮ್ಮ ಚೀಲದಲ್ಲಿ ಹಾವಿದೆ. ಹೊರ ತೆಗೆಯುತ್ತೇವೆ ಎಂದು ಕಾಂಗ್ರೆಸ್ ನಾಯಕರು ಆಧಾರಹಿತವಾಗಿ ಮಾತನಾಡದೆ ಅದನ್ನು ಧೈರ್ಯದಿಂದ ಹೊರಗೆ ಬಿಡಲಿ. ಆಗ ಅದು ಯಾರನ್ನು ಕಚ್ಚುತ್ತದೆ ನೋಡೋಣ’ ಎಂದರು.
‘ದಾಖಲೆ ಇದ್ದರೆ ಪ್ರತಿಪಕ್ಷಗಳು ಕೊಡಲಿ’ ಮಾಗಡಿ (ರಾಮನಗರ): ಬಿಟ್ ಕಾಯಿನ್ ವಿಚಾರದಲ್ಲಿ ರಾಜ್ಯ ಸರ್ಕಾರ ಎಲ್ಲ ರೀತಿಯ ತನಿಖೆಗೆ ಸಿದ್ಧವಿದೆ. ವಿರೋಧ ಪಕ್ಷಗಳು ಅಗತ್ಯ ದಾಖಲೆ ಇದ್ದರೆ ಒದಗಿಸಲಿ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
ಮಾಗಡಿಯಲ್ಲಿ ಗುರುವಾರ ಪತ್ರಕರ್ತರ ಜೊತೆ ಅವರು ಮಾತನಾಡಿದರು. ಮುಖ್ಯಮಂತ್ರಿ ಬೊಮ್ಮಾಯಿ ರಾಜ್ಯದ ಪ್ರತಿನಿಧಿಯಾಗಿ ಪ್ರಧಾನಿ ಅವರನ್ನು ಭೇಟಿ ಮಾಡಿದ್ದಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯ ಇಲ್ಲ. ಮುಖ್ಯಮಂತ್ರಿ ಬದಲಾವಣೆ ಸುದ್ದಿ ಬರೀ ಊಹಾಪೋಹ ಎಂದರು.