ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡರ ಹೇಳಿಕೆಗಳನ್ನು 'ನೈತಿಕ ದಿವಾಳಿತನದ ಪ್ರದರ್ಶನ' ಎಂದು ಕರ್ನಾಟಕ ಕಾಂಗ್ರೆಸ್ ಕುಹಕವಾಡಿದೆ.
ಈ ವಿಚಾರವಾಗಿ ಬುಧವಾರ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್ ಸಚಿವರಾದ ಕೆ.ಸುಧಾಕರ ಮತ್ತು ಬಿ.ಸಿ.ಪಾಟೀಲ ಅವರ ಹೇಳಿಕೆಗಳಿಗೆ ತಿರುಗೇಟು ನೀಡಿದೆ.
ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಕೆ.ಸುಧಾಕರ ಅವರು, 'ಬೇರೆಯವರೇನು ಏಕಪತ್ನಿ ವ್ರತಸ್ಥರಾ?' ಎಂದು ಪ್ರಶ್ನಿಸಿದ್ದಾರೆ. ಸುಧಾಕರ ಅವರ ಹೇಳಿಕೆಗೆ ಬೆಂಬಲ ಸೂಚಿಸಿ ಪ್ರತಿಕ್ರಿಯಿಸಿರುವ ಬಿ.ಸಿ.ಪಾಟೀಲ ಅವರು 'ಎಲ್ಲರೂ ಶ್ರೀರಾಮಚಂದ್ರರಲ್ಲ' ಎಂದಿದ್ದಾರೆ.
ಈ ಮಧ್ಯೆ, ಸಿಡಿ ಪ್ರಕರಣದ ತನಿಖೆಯನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಉಸ್ತುವಾರಿಯಲ್ಲೇ ನಡೆಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಸದಸ್ಯರು ವಿಧಾನಸಭೆಯಲ್ಲಿ ಮೂರನೆ ದಿನವೂ ಧರಣಿ ಮುಂದುವರಿಸಿದ್ದಾರೆ.
ಈ ಹೇಳಿಕೆಗಳನ್ನು ಟ್ವೀಟ್ನಲ್ಲಿ ನಮೂದಿಸಿರುವ ಕಾಂಗ್ರೆಸ್ ಪಕ್ಷವು ,'ಸಮರ್ಥನೆಗಳ ಮೂಲಕ ಬಿಜೆಪಿಗರು ತಾವು ಕಂಡವರ ಮನೆಯ ಹೆಣ್ಣುಮಕ್ಕಳನ್ನು ಮಂಚಕ್ಕೆ ಕರೆದು ಅತ್ಯಾಚಾರ ಮಾಡುವವರು ಎನ್ನುವುದನ್ನ ಒಪ್ಪಿಕೊಂಡಿದ್ದಾರೆ' ಎಂದು ತಿಳಿಸಿದೆ.
#BJPblueBoys ಬಂಡತನದ ಮೂಲಕ ತಮ್ಮ ನೈತಿಕ ದಿವಾಳಿತನ ಪ್ರದರ್ಶಿಸಿದ್ದಾರೆ ಎಂದೂ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಈ ಮಧ್ಯೆ, ಸಿ.ಡಿ ಪ್ರಕರಣದ ತನಿಖೆಯನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಉಸ್ತುವಾರಿಯಲ್ಲೇ ನಡೆಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಸದಸ್ಯರು ವಿಧಾನಸಭೆಯಲ್ಲಿ ಮೂರನೆ ದಿನವೂ ಧರಣಿ ಮುಂದುವರಿಸಿದ್ದಾರೆ.