ಬೆಂಗಳೂರು: ಕಳೆದ ಎರಡು ವರ್ಷದಲ್ಲಿ ಬಿಜೆಪಿ ನೇತೃತ್ವದ ಸಿಡಿ ಸರ್ಕಾರ ಮಾಡಿದ್ದೇನು ಎಂಬುದು ನಾಡಿನ ಜನತೆಗೆ ಸ್ಪಷ್ಟವಾಗಿದೆ ಎಂದು ಕರ್ನಾಟಕ ಕಾಂಗ್ರೆಸ್ ತಿಳಿಸಿದೆ.
ಈ ವಿಚಾರವಾಗಿ ಶನಿವಾರ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, 'ಬಿಜೆಪಿಯಲ್ಲಿ ಕಳಂಕರಹಿತರು ಒಬ್ಬರೂ ಸಿಗಲಾರರು ಎಂಬುದಕ್ಕೆ ಮತ್ತೊಂದು ಸಾಕ್ಷಿ. ಸಿಡಿಗೆ ತಡೆಯಾಜ್ಞೆ ತಂದ 6 ಜನರೊಂದಿಗೆ ಮುರುಗೇಶ್ ನಿರಾಣಿ, ಸದಾನಂದ ಗೌಡರ ಜೊತೆಗೆ ಶಾಸಕ ರೇಣುಕಾಚಾರ್ಯ ಈಗ ಹೊಸ ಸೇರ್ಪಡೆ' ಎಂದು ಹೇಳಿದೆ.
'ಕಳೆದ ಎರಡು ವರ್ಷದಲ್ಲಿ ಬಿಜೆಪಿ ನೇತೃತ್ವದ ಸಿಡಿ ಸರ್ಕಾರ ಮಾಡಿದ್ದೇನು ಎಂಬುದು ನಾಡಿನ ಜನತೆಗೆ ಈ ಮೂಲಕ ಸ್ಪಷ್ಟವಾಗಿದೆ' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಯಾವುದೇ ಸಿ.ಡಿ ಅಥವಾ ಮಾಹಿತಿಯ ಆಧಾರದಲ್ಲಿ ತಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಹ ಮಾನಹಾನಿಕರ ವರದಿ ಪ್ರಕಟಿಸಬಾರದು ಎಂದು ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಮಾಧ್ಯಮಗಳ ವಿರುದ್ಧ ನ್ಯಾಯಾಲಯದಿಂದ ಪ್ರತಿಬಂಧಕಾಜ್ಞೆ ಪಡೆದುಕೊಂಡಿದ್ದಾರೆ.
ಸಿ.ಡಿ ಒಂದನ್ನು ಬಳಸಿಕೊಂಡು ತಮ್ಮ ವಿರುದ್ಧ ವರದಿ ಪ್ರಕಟಿಸಲು ಸಂಚು ನಡೆದಿದ್ದು, ಇದರಿಂದ ತಮ್ಮ ವರ್ಚಸ್ಸಿಗೆ ಕುಂದುಂಟಾಗಲಿದೆ ಎಂದು ದೂರಿ ರೇಣುಕಾಚಾರ್ಯ ಅವರು ನಗರದ 20ನೇ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಜುಲೈ 26ರಂದು ಅರ್ಜಿ ಸಲ್ಲಿಸಿದ್ದರು. ಪ್ರತಿವಾದಿಗಳ ಗೈರಿನಲ್ಲೇ ನ್ಯಾಯಾಲಯವು ಜುಲೈ 28ರಂದು ಮಧ್ಯಂತರ ಪ್ರತಿಬಂಧಕಾಜ್ಞೆ ನೀಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.