ನವದೆಹಲಿ: ರಾಜ್ಯ ಬಿಜೆಪಿಯ ಪ್ರಮುಖರ ಸಮಿತಿಯನ್ನು ಪಕ್ಷದ ಹೈಕಮಾಂಡ್ ಇತ್ತೀಚೆಗೆ ಪುನರ್ರಚಿಸಿ ಆದೇಶಿಸಿದ್ದು, ಸಮಿತಿಯಲ್ಲಿದ್ದ ಇಬ್ಬರು ಪ್ರಮುಖರನ್ನು ಕೈಬಿಟ್ಟು, ನಾಲ್ವರನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ.
ಸಚಿವ ಅರವಿಂದ ಲಿಂಬಾವಳಿ ಹಾಗೂ ಹಿರಿಯ ಶಾಸಕ ಸಿ.ಎಂ. ಉದಾಸಿ ಅವರನ್ನು ಸಮಿತಿಯಿಂದ ಕೈಬಿಡಲಾಗಿದೆ.
ಉಪ ಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ, ಅಶ್ವತ್ಥನಾರಾಯಣ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ನಿರ್ಮಲಕುಮಾರ್ ಸುರಾನಾ ಹಾಗೂ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ಸಮಿತಿಗೆ ಹೊಸದಾಗಿ ಸೇರ್ಪಡೆಯಾಗಿದ್ದಾರೆ.
ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಇತ್ತೀಚೆಗಷ್ಟೇ ಬಡ್ತಿ ಹೊಂದಿರುವ ಸಿ.ಟಿ. ರವಿ ಹಾಗೂ ರಾಜ್ಯ ಸಹ ಉಸ್ತುವಾರಿ ಡಿ.ಕೆ. ಅರುಣಾ ಅವರು ಸಮಿತಿಯ ವಿಶೇಷ ಆಹ್ವಾನಿತರಾಗಿದ್ದಾರೆ.
ಪ್ರತಿ ತಿಂಗಳೂ ಸಮಿತಿ ಕನಿಷ್ಠ ಒಂದು ಬಾರಿಯಾದರೂ ಸಭೆ ಸೇರಬೇಕು. ಅಗತ್ಯವಿದ್ದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಭೆ ನಡೆಸಬಹುದು ಎಂದು ಸಮಿತಿ ಪುನರ್ರಚಿಸಿ ಆದೇಶ ಹೊರಡಿಸಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್್ ಸಿಂಗ್ ತಿಳಿಸಿದ್ದಾರೆ.