ಬೆಂಗಳೂರು: ಕೇಂದ್ರೀಯ ತನಿಖಾ ದಳ (ಸಿಬಿಐ)ದ ಅಧಿಕಾರಿಗಳ ತಂಡ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ನಿವಾಸಗಳಲ್ಲಿ ಬುಧವಾರ ಪರಿಶೀಲನೆ ನಡೆಸಿದೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಶಿವಕುಮಾರ್, ‘ಬಿಜೆಪಿಯವರಿಗೆ ನನ್ನ ವಿರುದ್ಧ ರಾಜಕೀಯ ಹೋರಾಟ ಮಾಡುವ ಶಕ್ತಿ ಇಲ್ಲ, ಹಾಗಾಗಿ ಸರ್ಕಾರಿ ಸಂಸ್ಥೆಗಳನ್ನು ಬಳಸಿಕೊಂಡು ಕಿರುಕುಳ ನೀಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.
‘ನಾನು ಕಾನೂನನ್ನು ಗೌರವಿಸುವ ವ್ಯಕ್ತಿ. ನಿರುದ್ಯೋಗ, ಬೆಲೆ ಏರಿಕೆ ಹಾಗೂ ಇನ್ನಿತರೆ ಸಮಸ್ಯೆಗಳ ವಿರುದ್ಧ ಮಾತನಾಡುತ್ತಿರುವುದೇ ನನ್ನ ಅಪರಾಧ’ ಎಂದು ಹರಿಹಾಯ್ದಿದ್ದಾರೆ.
ಶಿವಕುಮಾರ್ ಅವರ ಕನಕಪುರ, ದೊಡ್ಡಾಲಹಳ್ಳಿ, ಸಂತೆ ಕೋಡಿಹಳ್ಳಿಯಲ್ಲಿನ ಮನೆಗಳಿಗೆ ಭೇಟಿ ನೀಡಿದ ಎಂಟು ಅಧಿಕಾರಿಗಳ ತಂಡ, ಆಸ್ತಿ ಮತ್ತು ಇತರ ದಾಖಲೆಗಳನ್ನು ಪರಿಶೀಲಿಸಿದೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆಯೂ ಅಧಿಕಾರಿಗಳ ತಂಡವು ಡಿ.ಕೆ.ಶಿವಕುಮಾರ್ ಹಾಗೂ ಅವರ ಸಹೋದರ ಸಂಸದ ಡಿ.ಕೆ. ಸುರೇಶ್ ಅವರ ಮನೆಗಳಲ್ಲಿ ದಾಖಲೆಗಳನ್ನು ಪರಿಶೀಲಿಸಿತ್ತು.
ಬಿಜೆಪಿಯವರಿಗೆ ನನ್ನ ವಿರುದ್ಧ ರಾಜಕೀಯ ಹೋರಾಟ ಮಾಡುವ ಶಕ್ತಿ ಇಲ್ಲ, ಹಾಗಾಗಿ ಸರ್ಕಾರಿ ಸಂಸ್ಥೆಗಳನ್ನು ಬಳಸಿಕೊಂಡು ಕಿರುಕುಳ ನೀಡುತ್ತಿದ್ದಾರೆ. ನಾನು ಕಾನೂನನ್ನು ಗೌರವಿಸುವ ವ್ಯಕ್ತಿ. ನಿರುದ್ಯೋಗ, ಬೆಲೆ ಏರಿಕೆ ಹಾಗೂ ಇನ್ನಿತರೆ ಸಮಸ್ಯೆಗಳ ವಿರುದ್ಧ ಮಾತನಾಡುತ್ತಿರುವುದೇ ನನ್ನ ಅಪರಾಧ.