ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಾಜಕತೆ ಸೃಷ್ಟಿಸಿ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಯತ್ನ: ನಳಿನ್ ಕುಮಾರ್ ಕಟೀಲ್

Last Updated 23 ಏಪ್ರಿಲ್ 2022, 7:20 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸಿ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಪಕ್ಷ ಯತ್ನಿಸುತ್ತಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದರು.

ಶನಿವಾರ ಆರಂಭವಾದ ಬಿಜೆಪಿ ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ ಮತ್ತು ಬೆಂಗಳೂರು ಕೇಂದ್ರ ಜಿಲ್ಲಾ ಘಟಕಗಳ ಪ್ರಮುಖರ ಸಭೆಗೂ ಮೊದಲು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಅಧಿಕಾರದಲ್ಲಿ ಇಲ್ಲದ ಸಂದರ್ಭದಲ್ಲಿ ಸಮಾಜಘಾತುಕ‌ ಶಕ್ತಿಗಳ ಜತೆ ಕೈಜೋಡಿಸಿ ಗಲಭೆ ಸೃಷ್ಟಿಸುವುದು ಕಾಂಗ್ರೆಸ್ ಹವ್ಯಾಸ. ಈಗಲೂ ರಾಜ್ಯದಲ್ಲಿ ಅದೇ ಪ್ರಯತ್ನ ಮಾಡುತ್ತಿದೆ ಎಂದರು.

ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ ಗಲಭೆ, ಶಿವಮೊಗ್ಗದಲ್ಲಿ ಗಲಭೆಗೆ ಯತ್ನದ ಹಿಂದೆ ಕಾಂಗ್ರೆಸ್ ಕೈವಾಡ ಇತ್ತು. ಹಿಜಾಬ್ ವಿವಾದದ ಹಿಂದೆಯೂ ಕಾಂಗ್ರೆಸ್ ನಾಯಕರೇ ಇದ್ದರು. ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಯತ್ನದ ಹಿಂದೆಯೂ ಕಾಂಗ್ರೆಸ್ ಇರುವುದು ಬಯಲಾಗಿದೆ ಎಂದು ಹೇಳಿದರು.

ಹಿಂದೆ ಭಯೋತ್ಪಾದನೆಗೆ ಬೆಂಬಲ‌ ನೀಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಉದಾಹರಣೆ ಇದೆ. ಭಿಂದ್ರನ್ ವಾಲೆಯನ್ನು ಸೃಷ್ಟಿಸಿದ್ದೇ ಆ ಪಕ್ಷ. ದಾವೂದ್ ಇಬ್ರಾಹಿಂಗೂ ಬೆಂಬಲ‌ ನೀಡಿತ್ತು. ಈಗಲೂ ಕಾಂಗ್ರೆಸ್ ನಾಯಕರ ಮನಸ್ಥಿತಿ ಬದಲಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.

ಗಲಭೆ ಮತ್ತು ಭಯೋತ್ಪಾದನೆ ಹತ್ತಿಕ್ಕಲು ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಅಂತಹ ಕೃತ್ಯ ಎಸಗುವವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಕಾನೂನು ತರಬೇಕು ಎಂದು ಆಗ್ರಹಿಸಿದರು.

ಭ್ರಷ್ಟಾಚಾರದ ಗಂಗೋತ್ರಿ: ಕಾಂಗ್ರೆಸ್ ಪಕ್ಷಕ್ಕೂ ಭ್ರಷ್ಟಾಚಾರಕ್ಕೂ ಅವಿನಾಭಾವ ನಂಟು. ಭ್ರಷ್ಟಾಚಾರದ ಗಂಗೋತ್ರಿಯಾಗಿರುವ ಆ ಪಕ್ಷದ ನಾಯಕರಿಗೆ ಈ ಕುರಿತು ಮಾತನಾಡುವ ನೈತಿಕತೆ ಇಲ್ಲ ಎಂದು ಟೀಕಿಸಿದರು.

ಜವಾಹರಲಾಲ್ ನೆಹರೂ ಅವರಿಂದ ಮನಮೋಹನ್ ಸಿಂಗ್‌ವರೆಗೆ ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ಮಾತ್ರ ಭ್ರಷ್ಟಾಚಾರದ ಕಳಂಕದಿಂದ ದೂರ ಇದ್ದರು. ಉಳಿದ ಎಲ್ಲರಿಗೂ ಭ್ರಷ್ಟಾಚಾರದ ಕಳಂಕ ಅಂಟಿತ್ತು ಎಂದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳನ್ನು ಪಡೆಯಲು ಪೂರಕವಾಗಿ ಪಕ್ಷ ಸಂಘಟನೆಗೆ ಪ್ರವಾಸ ಮಾಡಲಾಗುತ್ತಿದೆ. ಹಿಂದಿನ ಚುನಾವಣೆಗಳಲ್ಲಿ ಆಗಿರುವ ಅನುಭವವದ ಆಧಾರದ ಮೇಲೆ ಹೊಸ ಕಾರ್ಯತಂತ್ರ ರೂಪಿಸಲಾಗುವುದು ಎಂದು ಹೇಳಿದರು.

ಬಿಜೆಪಿ ನಾಯಕರ ತಂಡದ ನೇತೃತ್ವ ವಹಿಸಿರುವ ಶಾಸಕ ಜಗದೀಶ ಶೆಟ್ಟರ್, ಸಚಿವರಾದ ಆರ್. ಅಶೋಕ, ವಿ. ಸೋಮಣ್ಣ, ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷರಾದ ತೇಜಸ್ವಿನಿ ಅನಂತಕುಮಾರ್, ಎಂ. ರಾಜೇಂದ್ರ, ಸಂಸದ ತೇಜಸ್ವಿ ಸೂರ್ಯ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT