ಬೆಂಗಳೂರು: ಸಿ.ಡಿ. ಪ್ರಕರಣ ಸಂಬಂಧ ಸ್ವ–ಇಚ್ಛಾ ಹೇಳಿಕೆ ನೀಡಲು ಯುವತಿಗೆ ನ್ಯಾಯಾಲಯದಿಂದ ಅನುಮತಿ ಸಿಕ್ಕಿರುವುದಾಗಿ ಗೊತ್ತಾಗಿದ್ದು, ಶೀಘ್ರವೇ ಯುವತಿ ನ್ಯಾಯಾಲಯಕ್ಕೆ ಹಾಜರಾಗುವ ಸಾಧ್ಯತೆ ಇದೆ.
ಯುವತಿ ಹೇಳಿಕೆ ದಾಖಲು ಮಾಡಿಕೊಳ್ಳುವಂತೆ ಕೋರಿ ಅವರ ಪರ ವಕೀಲರು, ನ್ಯಾಯಾಲಯದ ಉಪ ರಿಜಿಸ್ಟ್ರಾರ್ ಅವರಿಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ಪರಿಶೀಲನೆ ನಡೆಸಿದ್ದ ಉಪ ರಿಜಿಸ್ಟ್ರಾರ್, ಹೇಳಿಕೆ ದಾಖಲಿಸಿಕೊಳ್ಳಲು ಅನುಮತಿ ನೀಡಿದ್ದಾರೆ. ಅದರ ಆದೇಶ ಪ್ರತಿ ಪಡೆಯಲು ಜಗದೀಶ್ ಪರ ವಕೀಲರು, ನ್ಯಾಯಾಲಯಕ್ಕೆ ಬಂದಿದ್ದಾರೆ. ಪ್ರತಿ ಕೈ ಸೇರಿದ ನಂತರವೇ ಹೇಳಿಕೆ ದಾಖಲು ನಿಖರ ಸಮಯ ತಿಳಿಯಲಿದೆ.
24ನೇ ಎಸಿಎಂಎಂ ನ್ಯಾಯಾಲಯ ಅಥವಾ ನ್ಯಾಯಾಧೀಶರ ಮನೆಗೆ ಯುವತಿ ಬಂದು ಹೇಳಿಕೆ ನೀಡಲು ಅವಕಾಶವಿದೆ. ಹೀಗಾಗಿ, ನಗರದ ನ್ಯಾಯಾಲಯದಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಮಹಿಳಾ ಅಧಿಕಾರಿಗಳು ಸೇರಿದಂತೆ 50ಕ್ಕೂ ಹೆಚ್ಚು ಸಿಬ್ಬಂದಿಯನ್ನು ಸ್ಥಳದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.