ಬೆಂಗಳೂರು: ‘ಟಿಪ್ಪು ಸುಲ್ತಾನ್ ಕುರಿತು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರ ಹೇಳಿಕೆ ವೈಯಕ್ತಿಕವಾಗಿದ್ದು, ಪಕ್ಷಕ್ಕೂ ಅದಕ್ಕೂ ಸಂಬಂಧವಿಲ್ಲ. ಅವರ ಹೇಳಿಕೆಯಿಂದ ಪಕ್ಷ ದೂರ ಉಳಿಯಲು ಬಯಸುತ್ತದೆ’ ಎಂದು ಬಿಜೆಪಿ ಹೇಳಿದೆ.
‘ಟಿಪ್ಪು ಓರ್ವ ಮತಾಂಧ ಎಂಬುದಕ್ಕೆ ಪಕ್ಷ ಬದ್ಧವಾಗಿದೆ ಮತ್ತು ಈ ವಾದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಟಿಪ್ಪು ಕೊಡಗಿನಲ್ಲಿ ಹಿಂದುಗಳು ಮತ್ತು ಮಂಗಳೂರಿನಲ್ಲಿ ಕ್ರೈಸ್ತರ ಮಾರಣ ಹೋಮ ಮಾಡಿದ್ದನ್ನು ಮರೆಯಲಾಗುತ್ತದೆಯೇ’ ಎಂದು ಬಿಜೆಪಿ ರಾಜ್ಯ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದ್ದಾರೆ.
‘ಟಿಪ್ಪು ಕತ್ತಿಯ ಮೂಲಕ ಜನರನ್ನು ಬೆದರಿಸಿ, ಜನರನ್ನು ಮತಾಂತರಗೊಳಿಸಲು ಯತ್ನಿಸಿದ್ದ ಮತ್ತು ಪರ್ಷಿಯನ್ ಭಾಷೆಯನ್ನು ಆಡಳಿತ ಭಾಷೆಯನ್ನಾಗಿಸುವ ಮೂಲಕ ಕನ್ನಡ ವಿರೋಧಿಯೂ ಆಗಿದ್ದ. ಈ ಎಲ್ಲ ಕಾರಣಗಳಿಂದ ಬಿಜೆಪಿ ಎಂದಿಗೂ ಟಿಪ್ಪುವನ್ನು ಉತ್ತಮ ಆಡಳಿತಗಾರ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.