ಬೆಂಗಳೂರು: ತಮ್ಮ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೆರೆ, ಕಾಲುವೆಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾಗ ಭೂಗಳ್ಳರ ಬೆಂಬಲಕ್ಕೆ ನಿಂತಿದ್ದ ಬಿಜೆಪಿ, ಈಗ ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
‘ಬೆಂಗಳೂರಿನ ದುಸ್ಥಿತಿಗೆ ಕಾಂಗ್ರೆಸ್ ದುರಾಡಳಿತವೇ ಕಾರಣ’ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆರೋಪಕ್ಕೆ ಪತ್ರಿಕಾ ಹೇಳಿಕೆ ಮೂಲಕ ಪ್ರತಿಕ್ರಿಯಿಸಿರುವ ಅವರು, ‘ಯಾವ ಮಾಹಿತಿಯೂ ಇಲ್ಲದೆ ಸುಳ್ಳು ಹೇಳಿಕೊಂಡು ಓಡಾಡಿದರೆ ಆಗುವುದಿಲ್ಲ. ಇವರ ಸರ್ಕಾರದ ಅವಧಿಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆಗಳ ಗುಂಡಿ ಮುಚ್ಚಲೂ ಆಗದೆ ಹೈಕೋರ್ಟ್ನಿಂದ ಎಷ್ಟು ಬಾರಿ ಛೀಮಾರಿ ಹಾಕಿಸಿಕೊಂಡಿದ್ದಾರೆ ಎಂಬುದನ್ನು ಹೇಳಲಿ’ ಎಂದಿದ್ದಾರೆ.
11,680 ಎಕರೆ ಸರ್ಕಾರಿ ಜಮೀನು ಒತ್ತುವರಿಯನ್ನು ತಮ್ಮ ಸರ್ಕಾರದ ಅವಧಿಯಲ್ಲಿ ತೆರವುಗೊಳಿಸಲಾಗಿತ್ತು. ಬಿಜೆಪಿ ಶಾಸಕರಾಗಿದ್ದ ಎಸ್. ಸುರೇಶ್ ಕುಮಾರ್ ಮತ್ತು ಜಗದೀಶ್ ಕುಮಾರ್ ಒತ್ತುವರಿದಾರರ ಬೆಂಬಲಕ್ಕೆ ನಿಂತು ಸರ್ಕಾರದ ಕಾರ್ಯಾಚರಣೆ ವಿರೋಧಿಸಿದ್ದರು. ಬಿಜೆಪಿ ಸರ್ಕಾರ ಒತ್ತುವರಿದಾರರಿಗೆ ಅನುಕೂಲ ಮಾಡಿಕೊಡಲು ಕಾನೂನು ತಿದ್ಧುಪಡಿ ಮಾಡಿದೆ. ಅಕ್ರಮವಾಗಿ ನಿರ್ಮಿಸಿದ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕವನ್ನೂ ನೀಡಿ ಬೆಂಬಲಿಸುತ್ತಿದೆ ಎಂದು ಟೀಕಿಸಿದ್ದಾರೆ.
‘ನಾನು ಮುಖ್ಯಮಂತ್ರಿಯಾಗಿದ್ದಾಗ 2014ರ ಸೆಪ್ಟೆಂಬರ್ 26ರಂದು ಬೆಂಗಳೂರಿನಲ್ಲಿ ಒಂದೇ ದಿನ 132 ಮಿಲಿ ಮೀಟರ್ ಮಳೆ ಬಿದ್ದಿತ್ತು. ಆಗ ಸರ್ಕಾರ ಕೈಗೊಂಡಿದ್ದ ಮುನ್ನೆಚ್ಚರಿಕೆ ಕ್ರಮಗಳಿಂದ ಹೆಚ್ಚು ತೊಂದರೆ ಆಗಿರಲಿಲ್ಲ. ಆದರೆ, ಕಳೆದ ಭಾನುವಾರ 131.6 ಮಳೆ ಸುರಿದಿದ್ದರೂ ಭಾರಿ ಅನಾಹುತಗಳಾಗಿವೆ. ಬಿಜೆಪಿ ಸರ್ಕಾರದ ವೈಫಲ್ಯವೇ ಇದಕ್ಕೆ ಕಾರಣ’ ಎಂದು ದೂರಿದ್ದಾರೆ.