ವಿಜಯಪುರ: ಮುಖ್ಯಮಂತ್ರಿ ಬೊಮ್ಮಾಯಿ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವುದಾಗಿ ತಾಯಿ ಆಣೆ ಮಾಡಿದ್ದಾರೆ. ಒಂದು ವೇಳೆ ಅವರು ವಚನಭ್ರಷ್ಟರಾದರೆ ಈ ಹಿಂದೆ ಬಿಜೆಪಿಗೆ ಅಧಿಕಾರ ನೀಡುವುದಾಗಿ ಹೇಳಿ ವಚನಭ್ರಷ್ಟರಾದ ಎಚ್.ಡಿ.ಕುಮಾರಸ್ವಾಮಿಗೆ ಆದ ಗತಿಯೇ ಇವರಿಗೂ ಆಗಲಿದೆ ಎಂದು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಎಚ್ಚರಿಕೆ ನೀಡಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮುಖ್ಯಮಂತ್ರಿಯವರು ತಾಯಿ ಆಣೆ ಮಾಡಿರುವುದರಿಂದ ಡಿ.29ರಂದು ಮೀಸಲಾತಿ ಘೋಷಿಸುವ ವಿಶ್ವಾಸ ಇದೆ ಎಂದರು.
ಬೇರೆ ಸಮಾಜಗಳು ಮೀಸಲಾತಿ ಕೇಳುತ್ತಿರುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಸರ್ಕಾರ ಎಲ್ಲವನ್ನೂ ಪರಿಶೀಲಿಸಲಿದೆ ಎಂದರು.
ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿದ ಯತ್ನಾಳ, ಮೂರು ತಿಂಗಳಿಗೆ ಸಚಿವನಾಗುವ ಆಸೆ ನನಗಿಲ್ಲ. ಮೀಸಲಾತಿ ಕೊಡಿ, ಕಥೆ ಹೇಳಬೇಡಿ ಎಂದ್ದಿದ್ದೇನೆ. ಈಶ್ವರಪ್ಪ, ರಮೇಶ ಜಾರಕಿಹೊಳಿ, ಸಿ.ಪಿ.ಯೋಗೀಶ್ವರ ಅವರನ್ನು ಬೇಕಾದರೆ ಸಚಿವರನ್ನಾಗಿ ಮಾಡಲಿ ಎಂದು ಹೇಳಿದರು.