ಬೆಂಗಳೂರು: ಬುಕ್ ಬ್ರಹ್ಮ ಸಂಸ್ಥೆಯು ‘ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ’ಗೆ ಕಥೆಗಳನ್ನು ಹಾಗೂ ‘ಕಾದಂಬರಿ ಪುರಸ್ಕಾರ’ಕ್ಕೆ ಕಾದಂಬರಿಗಳನ್ನು ಆಹ್ವಾನಿಸಿದೆ.
ಕಾದಂಬರಿ ಪುರಸ್ಕಾರವು ₹ 1 ಲಕ್ಷ ನಗದು ಒಳಗೊಂಡಿದೆ. ಆಯ್ಕೆಯಾದ ಕೃತಿಯ ಲೇಖಕರಿಗೆ ₹ 75 ಸಾವಿರ ಹಾಗೂ ಪ್ರಕಾಶಕರಿಗೆ ₹ 25 ಸಾವಿರ ನೀಡಲಾಗುತ್ತದೆ. ಮೆಚ್ಚುಗೆ ಪಡೆಯುವ ನಾಲ್ಕು ಕಾದಂಬರಿಗಳಿಗೆ ತಲಾ ₹ 5 ಸಾವಿರ ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.
ಕಥಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕಥೆಗೆ ₹ 50 ಸಾವಿರ ನಗದು ಇರಲಿದೆ. ದ್ವಿತೀಯ ಸ್ಥಾನ ಪಡೆದ ಕಥೆಗೆ ₹ 25 ಸಾವಿರ, ತೃತೀಯ ಸ್ಥಾನ ಪಡೆದ ಕಥೆಗೆ ₹ 15 ಸಾವಿರ ನಗದು ಇರಲಿದೆ. ಉಳಿದಂತೆ ಐದು ಕಥೆಗಳಿಗೆ ತಲಾ ₹ 5 ಸಾವಿರ ನಗದು ನೀಡಲಾಗುತ್ತದೆ. ಅಂತಿಮ ಸುತ್ತಿಗೆ ಆಯ್ಕೆಯಾಗುವ 17 ಕಥೆಗಳಿಗೆ ತಲಾ ₹ 2 ಸಾವಿರ ರೂಪಾಯಿ ನೀಡಲಾಗುತ್ತದೆ. ಆಯ್ಕೆಯಾದ 25 ಕಥೆಗಳನ್ನು ಒಳಗೊಂಡ ಪುಸ್ತಕ ಪ್ರಕಟಿಸಲಾಗುತ್ತದೆ.
ಕಾದಂಬರಿ ಪುರಸ್ಕಾರಕ್ಕೆ ಕಾದಂಬರಿಗಳ ನಾಲ್ಕು ಪ್ರತಿಗಳನ್ನು ಏ.15ರೊಳಗೆ ಕಳುಹಿಸಬೇಕು. ಕಥಾ ಸ್ಪರ್ಧೆಗೆ ಕಥೆಗಳನ್ನು ಕಳುಹಿಸಲು ಮೇ 31 ಕಡೆಯ ದಿನಾಂಕ. ಆ.15ರಂದು ಪ್ರಶಸ್ತಿ ವಿತರಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಕಾದಂಬರಿ ಹಾಗೂ ಕಥೆಗಳನ್ನು ಕಳುಹಿಸಬೇಕಾದ ವಿಳಾಸ: ಪ್ರಧಾನ ಸಂಪಾದಕ, ಬುಕ್ ಬ್ರಹ್ಮ ಕನ್ನಡ, ಮೂರನೇ ಮಹಡಿ, ಆರ್. ಕೆ ಕಾಂಪ್ಲೆಕ್ಸ್, ಕೆಎಸ್ಎಸ್ಐಡಿಸಿ ಕಾಂಪೌಂಡ್, ಎಲೆಕ್ಟ್ರಾನಿಕ್ಸ್ ಸಿಟಿ ಮೊದಲ ಹಂತ, ಬೆಂಗಳೂರು-560100