ಬಾಗಲಕೋಟೆ: ’ಯಾರೋ ಕೆಲವರು ಹೈಕಮಾಂಡ್ಗೆ ಪತ್ರ ಬರೆದ ತಕ್ಷಣ ಏನೂ ಬದಲಾವಣೆ ಆಗೊಲ್ಲ. ನೂರಕ್ಕೆ ನೂರರಷ್ಟು ಇನ್ನೂ ಎರಡೂವರೆ ವರ್ಷ ಮುಖ್ಯಮಂತ್ರಿಯಾಗಿಯಡಿಯೂರಪ್ಪ ಮುಂದುವರೆಯಲಿದ್ದಾರೆ‘ ಎಂದು ತೋಟಗಾರಿಕೆ ಸಚಿವ ಆರ್.ಶಂಕರ್ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ಯಾರನ್ನು ಸಾರಥಿಯಾಗಿ ತೆಗೆದುಕೊಂಡು ಹೋಗಬೇಕು ಎಂಬುದು ಪಕ್ಷಕ್ಕೆ ಗೊತ್ತಿದೆ. ಹೀಗಾಗಿ ಸಿಎಂ ಸ್ಥಾನದಿಂದ ಯಡಿಯೂರಪ್ಪ ಬದಲಾವಣೆ ಆಗೋದಿಲ್ಲ. ಮುಂದಿನ ಚುನಾವಣೆಯೂ ಅವರ ಸಾರಥ್ಯದಲ್ಲಿಯೇ ನಡೆಯಲಿದೆ‘ ಎಂದರು.
ಇವೆಲ್ಲ ಅವಮಾನಗಳನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ಯಡಿಯೂರಪ್ಪ ಅವರಿಗೆ ಇದೆ. ಅವರು ನಾಯಕತ್ವಕ್ಕೆ ಸಮರ್ಥರಿದ್ದಾರೆ ಎಂಬುದನ್ನು ಪಕ್ಷದ ಹೈಕಮಾಂಡ್ ಕೂಡ ಒಪ್ಪಿಕೊಂಡಿದೆ ಎಂದರು.
ಸಚಿವ ಸ್ಥಾನದ ವಿಚಾರದಲ್ಲಿ ಎಲ್ಲವನ್ನೂ ಕಾಲ ಹಾಗೂ ಪಕ್ಷ ನಿರ್ಧಾರ ಮಾಡುತ್ತೆ. ಹೀಗಾಗಿ ಎಚ್.ವಿಶ್ವನಾಥ್ ಅವರಿಗೂ ಸಚಿವ ಸ್ಥಾನ ಕೊಡಿ ಎಂದು ಮನವಿ ಮಾಡಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಸಿಎಂ ಹೇಳಿದಂತೆ ನಾನು ಚುನಾವಣೆಯಲ್ಲಿ ಸ್ಪರ್ಧಿಸದೇ ಉಳಿದೆ. ತಡವಾಗಿಯಾದರೂ ಮಾತಿನಂತೆ ಕೊಡಬೇಕಾಗಿದ್ದನ್ನು ಕೊಟ್ಟಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದರು.